ADVERTISEMENT

ರಾಜ್ಯಸಭೆ ಚುನಾವಣೆಗೆ 5 ಅಭ್ಯರ್ಥಿಗಳು: ಎಎಪಿಯಿಂದ ಹರಭಜನ್, ಛಡ್ಡಾ ಕಣಕ್ಕೆ

ಪಿಟಿಐ
Published 21 ಮಾರ್ಚ್ 2022, 19:31 IST
Last Updated 21 ಮಾರ್ಚ್ 2022, 19:31 IST
ಹರಭಜನ್ ಸಿಂಗ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು–ಪಿಟಿಐ ಚಿತ್ರ
ಹರಭಜನ್ ಸಿಂಗ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು–ಪಿಟಿಐ ಚಿತ್ರ   

ಚಂಡೀಗಡ: ಇದೇ 31ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್, ದೆಹಲಿಯ ಎಎಪಿ ಶಾಸಕ ರಾಘವ ಛಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಸಂಸ್ಥಾಪಕ ಅಶೋಕ್ ಮಿತ್ತಲ್, ಐಐಟಿ ದೆಹಲಿಯ ಸಹಾಯಕ ಪ್ರಾಧ್ಯಾಪಕ ಸಂದೀಪ್ ಪಾಠಕ್ ಹಾಗೂ ಉದ್ಯಮಿ ಸಂಜೀವ್ ಅರೋರಾ ಅವರನ್ನು ಪಕ್ಷ ಹೆಸರಿಸಿದೆ.

ಈ ಐವರು ಅಭ್ಯರ್ಥಿಗಳು ಪಂಜಾಬ್ ವಿಧಾನಸಭಾ ಸಂಕೀರ್ಣದಲ್ಲಿ ಸೋಮವಾರ ನಾಮಪತ್ರಗಳನ್ನು ಸಲ್ಲಿಸಿದರು. ಛಡ್ಡಾ ಅವರು ದೆಹಲಿಯ ರಾಜಿಂದರ್ ನಗರದ ಶಾಸಕ. ಅರೋರಾ ಅವರು ಲೂಧಿಯಾನದ ಜವಳಿ ಉದ್ಯಮಿ.

ನಾಲ್ವರು ಹಿಂದೂಗಳು ಹಾಗೂ ಒಬ್ಬ ಸಿಖ್ ಸಮುದಾಯದ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಹಿಸಲು ಮುಂದಾಗಿರುವ ಎಎಪಿ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಸುಖಪಾಲ್ ಖೈರಾ ಟೀಕಿಸಿದ್ದಾರೆ. ‘ಇದು ಪಂಜಾಬ್‌ನ ಪಾಲಿಗೆ ಬೇಸರದ ಸುದ್ದಿ. ಇದು ರಾಜ್ಯದ ಬಗ್ಗೆ ಎಎಪಿ ತಳೆದಿರುವ ಮೊದಲ ತಾರತಮ್ಯ ನೀತಿ’ ಎಂದಿದ್ದಾರೆ. ಪಂಜಾಬಿಗಳಲ್ಲದವರನ್ನು ನಾಮನಿರ್ದೇಶನ ಮಾಡಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

ಎಎಪಿ ನಾಮನಿರ್ದೇಶನವನ್ನು ಶಿರೋಮಣಿ ಅಕಾಲಿದಳದ ಮುಖಂಡ ಹರ್‌ಚರಣ್ ಬಿಯಾನ್ಸ್ ಸಹ ಟೀಕಿಸಿದ್ದಾರೆ. ‘ಪಂಜಾಬ್ ಸಂಪುಟ ರಚನೆಯಲ್ಲಿ ಜಾತಿ ಹಾಗೂ ಧರ್ಮ ಪ್ರಾತಿನಿಧ್ಯ ಚರ್ಚಾಸ್ಪದವಾಗಿದೆ. ಹಾಗೆಯೇ ರಾಜ್ಯಸಭೆಗೆ ಕಳುಹಿಸುತ್ತಿರುವ ನಾಲ್ವರ ಪೈಕಿ ಇಬ್ಬರು ಪಂಜಾಬಿಗಳಲ್ಲ. ಜಾಟರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ಆದ್ಯತೆ ನೀಡಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.