ಚಂಡೀಗಢ: ಹರಿಯಾಣ ರಸ್ತೆ ಸಾರಿಗೆಯು ಆಯ್ದ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಪುನರಾರಂಭಿಸಿದ್ದು, ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ರಾಜ್ಯದೊಳಗೆ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಿದ ಮೊದಲ ರಾಜ್ಯ ಹರಿಯಾಣವಾಗಿದೆ.
ಅಂತರ ಕಾಪಾಡಿಕೊಳ್ಳಲು 30ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲು ಬಸ್ಗಳಿಗೆ ಅನುಮತಿ ನೀಡಿಲ್ಲ. ಈ ಬಸ್ಸುಗಳು ಬೆಳಿಗ್ಗೆಯಿಂದ ಆಯ್ದ ಮಾರ್ಗಗಳಲ್ಲಿ ಚಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ, ಬಸ್ಸುಗಳು ಅಂಬಾಲಾ, ಭಿವಾನಿ, ಹಿಸಾರ್, ಕೈತಾಲ್, ಕರ್ನಾಲ್, ನರ್ನಾಲ್, ಪಂಚಕುಲ, ರೇವಾರಿ, ರೋಹ್ಟಕ್ ಮತ್ತು ಸಿರ್ಸಾ ಡಿಪೋಗಳಿಂದ 29 ಮಾರ್ಗಗಳಲ್ಲಿ ಚಲಿಸುತ್ತಿವೆ. ರಸ್ತೆ ಸಾರಿಗೆಯಲ್ಲಿ 23 ಡಿಪೋಗಳಿದ್ದು, ಇದರಲ್ಲಿ 4,000ಕ್ಕೂ ಹೆಚ್ಚಿನ ಬಸ್ಸುಗಳಿವೆ. ಪಂಚಕುಲ ಡಿಪೋದಿಂದ ಮೊದಲ ಬಸ್ ಬೆಳಗ್ಗೆ ಸಿರ್ಸಾಗೆ ಹೊರಟಿತು.
ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರು ಆನ್ಲೈನ್ ಬುಕ್ಕಿಂಗ್ ಮತ್ತು ಮಾಸ್ಕ್ ಧರಿಸುವುದನ್ನುಕಡ್ಡಾಯಗೊಳಿಸಲಾಗಿದೆ.ಮಾರ್ಚ್ 24ರ ಮಧ್ಯರಾತ್ರಿ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡುವ ಮೊದಲೇ ಹರಿಯಾಣ ಸರ್ಕಾರ ಮಾರ್ಚ್ 23ರಂದು ಇಡೀ ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿತು.
ಬಸ್ ಟರ್ಮಿನಲ್ಗಳಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು, ಅವರ ಕೈಗಳನ್ನು ಸ್ವಚ್ಛಗೊಳಿಸಲಾಯಿತು ಮತ್ತು ಬಸ್ಸುಗಳನ್ನು ಹತ್ತುವ ಮೊದಲು ಪ್ರಯಾಣಿಕರು ಮಾಸ್ಕ್ ಧರಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿದರು.
ಬಸ್ ಟರ್ಮಿನಲ್ಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಹವಾನಿಯಂತ್ರಿತವಲ್ಲದ ಬಸ್ಸುಗಳು ಮಾತ್ರ ಚಲಿಸುತ್ತಿವೆ. ಅಂತರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 52 ಆಸನಗಳಿಗೆ ಅವಕಾಶವಿರುವ ಬಸ್ಸುಗಳಲ್ಲಿ ಕೇವಲ 30 ಜನರು ಬಸ್ ಹತ್ತಲು ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.