ADVERTISEMENT

FIRನಲ್ಲಿ ಎಲ್ಲ ಆರೋಪಿಗಳ ಹೆಸರು ದಾಖಲಿಸಿ:ಹರಿಯಾಣದ ಪೊಲೀಸ್ ಅಧಿಕಾರಿ ಪತ್ನಿಯ ಮನವಿ

ಪಿಟಿಐ
Published 10 ಅಕ್ಟೋಬರ್ 2025, 16:08 IST
Last Updated 10 ಅಕ್ಟೋಬರ್ 2025, 16:08 IST
   

ಚಂಡೀಗಢ: ‘ಎಲ್ಲ ಆರೋಪಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು’ ಎಂದು ಆತ್ಮಹತ್ಯೆ ಮಾಡಿಕೊಂಡ ಹರಿಯಾಣದ ಹಿರಿಯ ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಅವರ ಪತ್ನಿಯು ಶುಕ್ರವಾರ ಪೊಲೀಸರಿಗೆ ಪತ್ರ ಬರೆದಿದ್ದಾರೆ.

‘ಎಫ್‌ಐಆರ್‌ನಲ್ಲಿನ ‘ಅಪೂರ್ಣ ಮಾಹಿತಿ’ಯನ್ನು ಪ್ರಶ್ನಿಸಿರುವ ಹಿರಿಯ ಐಎಎಸ್‌ ಅಧಿಕಾರಿಯೂ ಆಗಿರುವ ಅಮ್ನೀತ್‌ ಪಿ. ಕುಮಾರ್‌ ಅವರು ಪ್ರಾಥಮಿಕ ತನಿಖಾ ವರದಿಯಲ್ಲಿ ತಿದ್ದುಪಡಿ ಮಾಡುವಂತೆ ಕೋರಿದ್ದಾರೆ.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ದುರ್ಬಲ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಇದನ್ನು ಬದಲಿಸಬೇಕು’ ಎಂದು ಅಮ್ನೀತ್‌ ಅವರು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್‌ದೀಪ್ ಕೌರ್ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಪೂರನ್ ಕುಮಾರ್‌ ಅವರು ಬರೆದಿಟ್ಟಿದ್ದ ಮರಣ ಪತ್ರವನ್ನು ಆಧರಿಸಿ ಚಂಡೀಗಢ ಪೊಲೀಸರು ಗುರುವಾರ ಸಂಜೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕೆಲವು ಸೆಕ್ಷನ್‌ಗಳನ್ನು ಉಲ್ಲೇಖಿಸಿ ಎಫ್ಐಆರ್‌ ದಾಖಲಿಸಿದ್ದರು.

‘ಹರಿಯಾಣ ಡಿಜಿಪಿ ಶತ್ರುಜೀತ್‌ ಕಪೂರ್‌ ಹಾಗೂ ರೋಹಟಕ್‌ ಎಸ್‌ಪಿ ನರೇಂದ್ರ ಬಿಜಾರಣಿಯಾ ಅವರು ಕಿರುಕುಳ ನೀಡುವ ಜೊತೆಗೆ ನನ್ನನ್ನು ಸದಾ ಅವಮಾನಿಸುತ್ತಿದ್ದರು’ ಎಂದು ಪೂರನ್‌ ತಮ್ಮ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನ್ಯಾಯ ಒದಗಿಸುವವರೆಗೆ’ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ಅಮ್ನೀತ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾತಿ ತಾರತಮ್ಯ: ಕ್ರಮಕೈಗೊಳ್ಳಿ
ನವದೆಹಲಿ: ಜಾತಿ ಆಧಾರಿತ ತಾರತಮ್ಯ ಎದುರಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ದಿನದೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಿ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು (ಎನ್‌ಸಿಎಸ್‌ಸಿ) ಹರಿಯಾಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.