ADVERTISEMENT

ಹಾಥರಸ್ ಅತ್ಯಾಚಾರ ಪ್ರಕರಣದಿಂದ ಮೂವರು ಖುಲಾಸೆ, ಒಬ್ಬ ದೋಷಿ

ಐಎಎನ್ಎಸ್
Published 2 ಮಾರ್ಚ್ 2023, 10:26 IST
Last Updated 2 ಮಾರ್ಚ್ 2023, 10:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: 2020ರಲ್ಲಿ ನಡೆದ ಹಾಥರಸ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಇಲ್ಲಿನ ಎಸ್‌ಸಿ/ಎಸ್‌ಟಿ ನ್ಯಾಯಾಲಯವು ಖುಲಾಸೆಗೊಳಿಸಿದ್ದು, ಒಬ್ಬನನ್ನು ಅಪರಾಧಿ ಎಂದು ತೀರ್ಪು ನೀಡಿದೆ.

ಸಂದೀಪ್‌, ರವಿ, ಲವ್‌ ಕುಶ್‌ ಹಾಗೂ ರಾಮು ಪ್ರಕರಣದ ಆರೋಪಿಗಳಾಗಿದ್ದರು. ಸಂದೀಪ್‌ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಯುವತಿಯ ಕುಟುಂಬದವರು, ಖುಲಾಸೆಗೊಳಿಸಿರುವ ಕೋರ್ಟ್‌ ತೀರ್ಪಿನಿಂದ ಬೇಸರವಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ADVERTISEMENT

ಮೇಲ್ಜಾತಿಗೆ ಸೇರಿದ ನಾಲ್ವರು, 2020ರ ಸೆಪ್ಟೆಂಬರ್‌ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಅದೇ ತಿಂಗಳ (ಸೆಪ್ಟೆಂಬರ್‌) 29ರಂದು ಮೃತಪಟ್ಟಿದ್ದರು. ಅದೇ ದಿನ ಆಕೆಯ ಮನೆಯ ಸಮೀಪದಲ್ಲೇ ರಾತ್ರೋ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಈ ಬಗ್ಗೆ ಮೃತ ಯುವತಿಯ ಕುಟುಂಬದವರು, ಸ್ಥಳೀಯ ಪೊಲೀಸರ ವಿರುದ್ಧ ಕಿಡಿಕಾರಿದ್ದರು. ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಒತ್ತಾಯ ಮಾಡಿದ್ದರು ಎಂದು ಆರೋಪಿಸಿದ್ದರು. ಇದನ್ನು ಅಲ್ಲಗಳೆದಿದ್ದ ಪೊಲೀಸರು, ಕುಟುಂಬದವರು ಹೇಳಿದಂತೆಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.