ತಿರುನಲ್ವೇಲಿ (ತಮಿಳುನಾಡು): ತಮ್ಮ ಪ್ರತಿಸ್ಪರ್ಧಿಗಳನ್ನು ‘ತುಳಿದು ಹಾಕಿರುವ’ ಪ್ರಧಾನಿ ನರೇಂದ್ರ ಮೋದಿ ಅವರು ‘ಅಸಾಧ್ಯ ಶತ್ರು’. ಪ್ರೀತಿ ಮತ್ತು ಅಹಿಂಸೆಯ ದಾರಿಯ ಮೂಲಕವೇ ಅವರನ್ನು ರಾಜಕೀಯ ವಿಸ್ಮೃತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮಿಳುನಾಡಿನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ತಮ್ಮ ಉತ್ತಮ ಚಿಂತನೆಗಳನ್ನು ಜಾರಿಗೆ ತರಲು ಅಧಿಕಾರಕ್ಕೆ ಬರುವವರೆಗೆ ಕಾಯುವುದಕ್ಕಿಂತ ಈಗಿನ ಕೇಂದ್ರ ಸರ್ಕಾರವೇ ಅವುಗಳನ್ನು ಜಾರಿಗೆ ತರುವಂತೆ ಒತ್ತಡ ಹೇರುವುದು ಉತ್ತಮವಲ್ಲವೇ ಎಂಬ ಪ್ರಶ್ನೆಗೆ ರಾಹುಲ್ ಉತ್ತರಿಸಿದರು.
‘ನಾವು ಅಸಾಧ್ಯ ಶತ್ರುವಿನ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದು ನಿಜ. ಹಣದಲ್ಲಿ ಬಹಳ ಪ್ರಭಾವಿಯಾಗಿರುವ ಶತ್ರುವಿನ ವಿರುದ್ಧದ ಹೋರಾಟ ನಮ್ಮದು. ಪ್ರತಿಸ್ಪರ್ಧಿಗಳನ್ನು ತುಳಿದು ಹಾಕುವ ಶತ್ರುವಿನ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ, ಇದನ್ನು ನಾವು ಹಿಂದೆಯೂ ಮಾಡಿದ್ದೇವೆ. ಈಗ ಇರುವ ಹೊಸ ಶತ್ರುವಿಗಿಂತ ಬಹಳ ದೊಡ್ಡದಾಗಿದ್ದ ಶತ್ರು ಬ್ರಿಟಿಷರನ್ನು ನಾವು ಸೋಲಿಸಿದ್ದೇವೆ’ ಎಂದು ವಿವರಿಸಿದರು.
‘ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ಮೋದಿ ಅವರು ಏನೂ ಅಲ್ಲ. ಈ ದೇಶದ ಜನರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂದಕ್ಕೆ ಅಟ್ಟಿದ್ದಾರೆ. ಅದೇ ರೀತಿ ನಾವು ಮೋದಿ ಅವರನ್ನು ನಾಗ್ಪುರಕ್ಕೆ (ಆರ್ಎಸ್ಎಸ್ ಕೇಂದ್ರ ಕಚೇರಿ) ಕಳುಹಿಸುತ್ತೇವೆ’ ಎಂದರು. ಆದರೆ, ಮೋದಿ ಅಥವಾ ಅವರ ಪಕ್ಷದ ಬಗ್ಗೆ ದ್ವೇಷ, ಸಿಟ್ಟು ಅಥವಾ ಹಿಂಸೆ ಇಲ್ಲದೆಯೇ ಇದನ್ನು ಸಾಧಿಸಲಾಗುವುದು ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.