ADVERTISEMENT

ಲೋಕಪಾಲರ ನೇಮಿಸದಿದ್ದರೆ ಉಪವಾಸ ಸತ್ಯಾಗ್ರಹ: ಅಣ್ಣಾ ಹಜಾರೆ ಎಚ್ಚರಿಕೆ

ಪಿಟಿಐ
Published 1 ಡಿಸೆಂಬರ್ 2018, 13:27 IST
Last Updated 1 ಡಿಸೆಂಬರ್ 2018, 13:27 IST
ಅಣ್ಣಾ ಹಜಾರೆ
ಅಣ್ಣಾ ಹಜಾರೆ   

ಮುಂಬೈ: ಲೋಕಪಾಲರ ನೇಮಕ ಮಾಡದೇ ಇದ್ದರೆ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜತೇಂದ್ರ ಸಿಂಗ್‌ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಹಜಾರೆ, ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಲೋಕಪಾಲರು ಮತ್ತು ವಿವಿಧ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕ ಮಾಡದೆ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಲೋಕಸಭೆಯಲ್ಲಿನ ವಿರೋಧಪಕ್ಷದ ನಾಯಕ ಇಲ್ಲದ ಕಾರಣ ಲೋಕಪಾಲರ ನೇಮಕ ಮಾಡಲಾಗುತ್ತಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೊದಲಿಗೆ ಹೇಳುತಿತ್ತು. (ವಿರೋಧಪಕ್ಷದ ನಾಯಕರು ಆಯ್ಕೆ ಪ್ರಕ್ರಿಯೆ ಭಾಗವಾಗಿರುತ್ತಾರೆ) ಈಗ ಆಯ್ಕೆ ಸಮಿತಿಯಲ್ಲಿ ಅರ್ಹ ನ್ಯಾಯಾಧೀಶರೇ ಇಲ್ಲ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಈ ವರ್ಷದ ಮಾರ್ಚ್‌ 23ರಂದುಅಣ್ಣಾ ಸತ್ಯಾಗ್ರಹ ಕೈಗೊಂಡಿದ್ದರು. ಆದರೆ ಬೇಡಿಕೆ ಈಡೇರಿಕೆ ಬಗ್ಗೆ ಪ್ರಧಾನಮಂತ್ರಿ ಕಚೇರಿಯಿಂದ ಭರವಸೆ ಸಿಕ್ಕ ನಂತರ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದಿದ್ದರು. ಇದಾದ ನಂತರ ಅಕ್ಟೋಬರ್ 2ಕ್ಕೆ ಅಂತಿಮ ಗಡುವು ನೀಡಿದ್ದರು.

‘ಸದ್ಯದ ಸರ್ಕಾರಗಳು ಲೋಕಪಾಲ ಮತ್ತು ಲೋಕಾಯುಕ್ತರ ನೇಮಕ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಅಣ್ಣಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.