
ನವದೆಹಲಿ: ‘ಭಾರತೀಯ ಮಸಾಲೆ ಪದಾರ್ಥಗಗಳಲ್ಲಿ ಸಗಣಿ ಮತ್ತು ಗೋಮೂತ್ರದ ಅಂಶಗಳಿವೆ’ ಎಂಬ ಅಡಕವುಳ್ಳ ವಿಡಿಯೊಗಳ ಪ್ರಸಾರವನ್ನು ತಡೆಹಿಡಿಯಬೇಕು ಇಲ್ಲವೇ ಕೈಬಿಡಬೇಕು ಎಂದು ದೆಹಲಿ ಹೈಕೋರ್ಟ್, ಯೂಟ್ಯೂಬ್ ಜಾಲತಾಣಕ್ಕೆ ಆದೇಶಿಸಿದೆ.
‘ಕ್ಯಾಚ್‘ ಒಳಗೊಂಡಂತೆ ಕೆಲವು ಪ್ರಮುಖ ಬ್ರ್ಯಾಂಡ್ಗಳನ್ನು ಗುರಿಯಾಗಿಸಿ, ತಪ್ಪು ಮಾಹಿತಿ ಒಳಗೊಂಡ ವಿಡಿಯೊಗಳನ್ನು ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬ ಆರೋಪ ಕುರಿತ ಅರ್ಜಿದಾರರ ವಾದವನ್ನು ಆಧರಿಸಿ ಈ ಆದೇಶ ನೀಡಲಾಗಿದೆ.
ವಾಸ್ತವಕ್ಕೆ ದೂರವಾದ ಮಾಹಿತಿಯುಳ್ಳ ವಿಡಿಯೊ ಅಪ್ಲೋಡ್ ಮಾಡುವುದರ ಉದ್ದೇಶ ‘ಕ್ಯಾಚ್’ ಬ್ರ್ಯಾಂಡ್ ಮಸಾಲೆ ಪದಾರ್ಥಗಳನ್ನು ಮಾರುವ ಅರ್ಜಿದಾರ ಸಂಸ್ಥೆಗೆ ಕೆಟ್ಟ ಹೆಸರು ತರುವಂತಹದ್ದಾಗಿದೆ ಎಂಬ ವಾದ ತನಗೆ ಮನದಟ್ಟಾಗಿದೆ ಎಂದೂ ಹೈಕೋರ್ಟ್ ಹೇಳಿತು.
ಟಿವಿಆರ್, ವ್ಯೂವ್ಸ್ ಎನ್ ನ್ಯೂಸ್ ಚಾನಲ್ಗಳಿಂದ ಇಂತಹ ವಿಡಿಯೊ ಅಪ್ಲೋಡ್ ಆಗಿದ್ದು, ಇದರಲ್ಲಿ ಭಾರತದ ಮಸಾಲೆಗಳ ಕುರಿತು ವಾಸ್ತವಕ್ಕೆ ದೂರವಾದ, ಮುಖ್ಯವಾಗಿ ಕ್ಯಾಚ್ ಬ್ರ್ಯಾಂಡ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇದೆ ಎಂದು ಅರ್ಜಿದಾರರು ದೂರಿದ್ದರು.
’ಯೂಟ್ಯೂಬ್ನ ವಿಡಿಯೊಗಳಿಗೆ ಬರುವ ಪ್ರತಿಕ್ರಿಯೆಗಳ ಪ್ರಕಾರ, ನಕಲಿ ಹೇಳಿಕೆಗಳಿಂದ ವೀಕ್ಷಕರು ಪ್ರಭಾವಿತರಾಗಿದ್ದಾರೆ. ಇದು, ಅರ್ಜಿದಾರರಾದ ‘ಧರ್ಮಪಾಲ್ ಸತ್ಯಪಾಲ್ ಸನ್ಸ್ ಪ್ರೈವೇಟ್ ಲಿಮಿಟೆಡ್’ ಕುರಿತು ಪೂರ್ವಗ್ರಹ ಭಾವನೆ ಬೆಳೆಸಿದೆ. ವಿಡಿಯೊಗಳು ಸುಲಭವಾಗಿ ವೀಕ್ಷಕರಿಗೆ ದಕ್ಕಲಿದ್ದು, ಹೆಚ್ಚಿನ ಜನರಿಗೂ ಇದು ಹಂಚಿಕೆಯಾಗಲಿದೆ. ಇದರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ‘ ಎಂದು ನ್ಯಾಯಮೂರ್ತಿ ಸಂಜೀವ್ ನಾರುಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.