ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಮಧ್ಯಾಹ್ನ ಮಾಡಿದ ಟ್ವೀಟ್ ರಾಜಕೀಯ ನಾಯಕರು, ಟ್ವೀಟಿಗರ ಟೀಕೆಗೆ ಗುರಿಯಾಗಿದೆ.
ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಯಿತು.ಈ ಹದಿನೈದು ಕ್ಷೇತ್ರಗಳ ಪೈಕಿ ಜೆಡಿಎಸ್ ಒಂದೂ ಸೀಟು ಪಡೆಯದೇ ಹೀನಾಯ ಸೋಲು ಅನುಭವಿಸಿತು. ಫಲಿತಾಂಶದ ಕುರಿತು ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ‘ಇದೊಂದು "ಅಸಹ್ಯ" ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು 'ಪವಿತ್ರ' ಮತ್ತು 'ಸುಭದ್ರ' ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು,’ ಎಂದಿದ್ದರು.
ಈ ಟ್ವೀಟ್ನಲ್ಲಿ ಕುಮಾರಸ್ವಾಮಿ ಜನರ ತೀರ್ಪನ್ನುಟೀಕಿಸಿದ್ದಾರೆ ಎಂಬ ಅಭಿಪ್ರಾಯ ರಾಜಕೀಯ ನಾಯಕರು ಮತ್ತು ನೆಟ್ಟಿಗರಿಂದ ವ್ಯಕ್ತವಾಗಿದೆ.
ಜನರ ತೀರ್ಪಿನ ವ್ಯಂಗ್ಯ ಸರಿಯಲ್ಲ: ಶ್ರೀರಾಮುಲು ಟ್ವೀಟ್
ಕುಮಾರಸ್ವಾಮಿ ಅವರ ಟ್ವೀಟ್ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು. ‘ಯಾರು ಸಹ್ಯ, ಯಾರು ಅಸಹ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣಿಯ ಗುಣ. ಅದನ್ನು ಬಿಟ್ಟು ಜನರ ತೀರ್ಪಿನ ಬಗ್ಗೆ ವ್ಯಂಗ್ಯದ ಟೀಕೆಗಳು ವ್ಯಕ್ತಿಯ ಮನಸ್ಥಿತಿಯನ್ನು ಹೇಳುತ್ತದೆ. ಸೋಲನ್ನು ಒಪ್ಪಿಕೊಂಡು ಜನರನ್ನು ಗೌರವಿಸುವ ಗುಣ ಬರುವವರೆಗೆ ಗೆಲುವಿನ ರುಚಿ ನೋಡಲು ಸಾಧ್ಯವಿಲ್ಲ,’ ಎಂದಿದ್ದಾರೆ.
ಎಡಬಿಡಂಗಿ ರಾಜಕಾರಣ
ಕುಮಾರಸ್ವಾಮಿ ಅವರ ಅಭಿಪ್ರಾಯವನ್ನು ಟ್ವೀಟ್ ಮೂಲಕವೇ ಟೀಕಿಸಿರುವ ಸಚಿವ ಸಿ.ಟಿ ರವಿ, ‘ಅಪ್ಪ-ಮಕ್ಕಳ ನಾಟಕ ಕಂಪನಿ ಈ ಬಾರಿ ಎಷ್ಟೇ ಕಣ್ಣೀರು ಸುರಿಸಿದರೂ ನಂಬದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ "ಅಪವಿತ್ರ ಮೈತ್ರಿ" ಮತ್ತು "ಅಭದ್ರ ಸರ್ಕಾರ" ರಚಿಸುವ ಕನಸು ಕಂಡವರನ್ನು "ಅಸಹ್ಯ" ಪಟ್ಟುಕೊಳ್ಳುವ ರೀತಿಯಲ್ಲಿ ತಿರಸ್ಕರಿಸಿದ್ದಾರೆ. ಎಡಬಿಡಂಗಿ ರಾಜಕಾರಣ ಮಾಡುವವರ ಠೇವಣಿ ಕಳೆದ ಜನರಿಗೆ ಮನದಾಳದ ಅಭಿನಂದನೆಗಳು,’ ಎಂದಿದ್ದಾರೆ.
ಟ್ವೀಟಿಗರ ಟೀಕೆಗಳಿವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.