ಪಟ್ನಾ: ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರು ಹೆಚ್ಚೆಂದರೆ ನನಗೆ ಗುಂಡಿಕ್ಕಬಹುದಷ್ಟೆ. ಬೇರೇನೂ ಮಾಡಲು ಅವರಿಂದಾಗದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಅ. 30ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ನಿತೀಶ್ ಅವರನ್ನು ‘ವಿಸರ್ಜನೆ’ ಮಾಡಲಿದ್ದೇನೆ ಎಂಬ ಲಾಲು ಹೇಳಿಕೆಗೆ ನಿತೀಶ್ ಅವರು ಈ ರೀತಿ ಉತ್ತರ ನೀಡಿದ್ದಾರೆ.
ತಾರಾಪುರ ಮತ್ತು ಕುಶೇಶ್ವರ ಆಸ್ಥಾನ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾರಣ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಲಾಲೂ ಪ್ರಸಾದ್ ಅವರು ಮೂರು ವರ್ಷಗಳ ಬಳಿಕ ಇತ್ತೀಚೆಗೆ ಪಟ್ನಾಗೆ ಆಗಮಿಸಿದ್ದು, ಉಪಚುನಾವಣೆ ಪ್ರಚಾರಾಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದ್ದರು. ಉಪಚುನಾವಣೆಗಳಲ್ಲಿ ನಿತೀಶ್ರನ್ನು ‘ವಿಸರ್ಜನೆ’ ಮಾಡಲಿದ್ದೇನೆ ಎಂದು ಲಾಲೂ ಹೇಳಿದ್ದರು. ಇದರ ಬೆನ್ನಲ್ಲೇ ನಿತೀಶ್ ಹಾಗೂ ಲಾಲೂ ನಡುವೆ ಮಾತಿನ ಚಕಮಕಿ ಆರಂಭಗೊಂಡಿತ್ತು.
ಲಾಲೂ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, ‘ಅವರು ಬಯಸಿದರೆ ನನ್ನ ಮೇಲೆ ಶೂಟ್ ಮಾಡಬಹುದಷ್ಟೆ. ಬೇರೇನೂ ಮಾಡಲಾಗದು. ಅವರ ಆಡಳಿತಾವಧಿಯ ಜಂಗಲ್ ರಾಜ್ ಅನ್ನು ಜನ ಇನ್ನೂ ಮರೆತಿಲ್ಲ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಎರಡೂ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.