ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್
ಪಿಟಿಐ ಚಿತ್ರ
ನವದೆಹಲಿ: ಅಕ್ರಮವಾಗಿ ನೆಲೆಸಿದ್ದ ಆರೋಪದಲ್ಲಿ ಅಮೆರಿಕದಿಂದ ಗಡೀಪಾರಾದವರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ತಿರುಗೇಟು ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಜವಾಬ್ದಾರಿ ನಿರ್ವಹಿಸಲು ವಿಫಲವಾಗಿರುವ ಮಾನ್ ಅವರನ್ನು ಮದ್ಯ ಸೇವನೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ 104 ಭಾರತೀಯರ ಮೊದಲ ತಂಡ ಫೆಬ್ರುವರಿ 5ರಂದು ಹಾಗೂ 116 ಮಂದಿ ಇದ್ದ ಎರಡನೇ ತಂಡ ಫೆಬ್ರುವರಿ 15ರಂದು (ಶನಿವಾರ) ಭಾರತಕ್ಕೆ ಬಂದಿಳಿದಿವೆ. ಎರಡೂ ತಂಡಗಳನ್ನು ಹೊತ್ತ ಅಮೆರಿಕದ ವಿಮಾನಗಳು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ.
ಎರಡನೇ ವಿಮಾನ ಬರುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಮಾನ್, ಪಂಜಾಬಿಗಳು ಮಾತ್ರ ಅಕ್ರಮ ವಲಸಿಗರು ಎಂದು ಬಿಂಬಿಸಲು ಅಮೃತಸರವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪಂಜಾಬ್ ಮತ್ತು ಪಂಜಾಬಿಗಳ ಮಾನಹಾನಿ ಮಾಡುವ ಷಡ್ಯಂತ್ರ ಇದ ಹಿಂದೆ ಇದೆ ಎಂದು ದೂರಿದ್ದರು.
ಮಾನ್ ಹೇಳಿಕೆಗೆ ಶನಿವಾರವೇ ಪ್ರತಿಕ್ರಿಯಿಸಿದ್ದ ಬಿಟ್ಟು, 'ಪಂಜಾಬ್ನಲ್ಲಿ ವಿಮಾನ ಇಳಿಯುತ್ತದೆ ಎಂದ ಮಾತ್ರಕ್ಕೆ ರಾಜ್ಯದ ಮಾನಹಾನಿ ಹೇಗಾಗುತ್ತದೆ? ಗಡೀಪಾರಾದವರನ್ನು ಬರಮಾಡಿಕೊಳ್ಳಲು ಬರದಿದ್ದರೆ ಮುಖ್ಯಮಂತ್ರಿ ಮಾನ್ ಅವರನ್ನು ಮದ್ಯ ಸೇವನೆ ಪರೀಕ್ಷೆಗೆ ಒಳಪಡಿಸಬೇಕು' ಎಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಗಡೀಪಾರಾಗಿರುವ ಯುವಕರು ಅಕ್ರಮ ಮಾರ್ಗವಾಗಿ ಅಮೆರಿಕಕ್ಕೆ ತೆರಳಿದ್ದರು. ಆ ರೀತಿಯ ಮಾರ್ಗದಲ್ಲಿ ಅವರನ್ನೆಲ್ಲ ಕಳುಹಿಸಿದವರು ಯಾರು? ವಂಚಕರ ವಿರುದ್ಧ ಮಾನ್ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಿಡಿಕಾರಿದ್ದರು.
ಎರಡನೇ ತಂಡದಲ್ಲಿ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗರ ಪೈಕಿ ಪಂಜಾಬ್ನ 65, ಹರಿಯಾಣದ 33, ಗುಜರಾತ್ನ 8, ಉತ್ತರ ಪ್ರದೇಶ, ಗೋವಾದ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಒಬ್ಬೊಬ್ಬರು ಇದ್ದಾರೆ. ಇದರಲ್ಲಿ ಹೆಚ್ಚಿನವರು 18ರಿಂದ 30 ವರ್ಷ ವಯೋಮಾನದವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.