ಈರೋಡ್ (ತಮಿಳುನಾಡು): ಆರು ಮಂದಿ ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯವನ್ನು ಶುಚಿಗೊಳಿಸಿರುವ ಪೆರುಂದುರೈ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಆರು ಮಂದಿ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ಜ್ವರ ಬಂದಿದೆ. ನವೆಂಬರ್ 21ರಂದು ಶೌಚಾಲಯ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸೊಳ್ಳೆಗಳು ಕಚ್ಚಿರುವುದರಿಂದ ಜ್ವರ ಬಂದಿದೆ ಎಂದು ವರದಿಯಾಗಿದೆ.
ಈ ಘಟನೆ ಕುರಿತು ವಿದ್ಯಾರ್ಥಿಯ ತಾಯಿ ಈರೋಡ್ ಜಿಲ್ಲಾಧಿಕಾರಿ ಎಚ್.ಕೃಷ್ಣನುಣ್ಣಿಗಮನಕ್ಕೆ ತಂದಿದ್ದು, ಇವರು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ವಿಚಾರಣೆ ಆರಂಭವಾಗಿದೆ.
ಆರು ವಿದ್ಯಾರ್ಥಿಗಳಿಂದ ಎರಡು ಶೌಚಾಲಯಗಳನ್ನು ಶುಚಿಗೊಳಿಸಿದ್ದಾರೆ. ಒಂದು ಶಿಕ್ಷಕರು ಬಳಸುವ ಶೌಚಾಲಯ ಮತ್ತೊಂದು ವಿದ್ಯಾರ್ಥಿಗಳು ಬಳಸುವ ಶೌಚಾಲಯ. ಈ ಘಟನೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಯಿನಿ ಅವರನ್ನು ಶಿಕ್ಷಣ ಇಲಾಖೆಯ ಮುಂದೆ ಹಾಜರಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.