ADVERTISEMENT

ನಿದ್ದೆಯಿಂದ ಎಚ್ಚೆತ್ತು ಕೋವಿಡ್ ಸವಾಲು ಎದುರಿಸಲು ಸ್ಪಂದಿಸಿ: ಕೇಂದ್ರಕ್ಕೆ ಐಎಂಎ

ಪಿಟಿಐ
Published 9 ಮೇ 2021, 2:07 IST
Last Updated 9 ಮೇ 2021, 2:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಶಮನಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಎಚ್ಚೆತ್ತುಕೊಂಡು ತಕ್ಷಣ ಸ್ಪಂದಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಎಚ್ಚರಿಸಿದೆ.

ದೇಶದಲ್ಲಿ ತೀವ್ರವಾಗಿ ವ್ಯಾಪಿಸಿರುವ ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವೈದ್ಯರ ಸಂಘವು ಆರೋಪಿಸಿದೆ.

ಆರೋಗ್ಯ ಸಚಿವಾಲಯವು ನಿದ್ರೆಯಿಂದ ಎಚ್ಚೆತ್ತುಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವ ಸವಾಲುಗಳನ್ನು ಕಡಿಮೆ ಮಾಡಲು ತ್ವರಿತವಾಗಿ ಸ್ಪಂದಿಸುವಂತೆ ಒತ್ತಾಯಿಸುತ್ತದೆ. ವಿನಾಶಕಾರಿ ಎರಡನೇ ತರಂಗದಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸುವಲ್ಲಿ ಆರೋಗ್ಯ ಸಚಿವಾಲಯ ತೋರಿದ ನಿರುತ್ಸಾಹ ಹಾಗೂ ಸೂಕ್ತವಲ್ಲದ ಕ್ರಮಗಳನ್ನು ನೋಡಿ ಐಎಂಎ ಆಶ್ಚರ್ಯಚಕಿತಗೊಂಡಿದೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಕಳೆದ 20 ದಿನಗಳಿಂದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ಸಂಪೂರ್ಣ ಪೂರ್ವಯೋಜಿತ ರಾಷ್ಟ್ರೀಯ ಲಾಕ್‌ಡೌನ್ ಹೇರಲು ಒತ್ತಾಯಿಸುತ್ತಿದೆ. ಆದರೆ ಐಎಂಎ ಮಾಡಿರುವ ಸಲಹೆಗಳನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ವಾಸ್ತವತೆಗಳನ್ನು ಅರಿಯದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದುಟೀಕಿಸಿದೆ.

ಲಾಕ್‌ಡೌನ್ ಹೇರಲು ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಗಂಭೀರ ಪ್ರಕರಣಗಳು ಶೇಕಡಾ 40ರಷ್ಟು ಹೆಚ್ಚಾಗಿದೆ. ರಾತ್ರಿ ಕರ್ಫ್ಯೂ ಯಾವುದೇ ಪರಿಣಾಮವನ್ನು ಬೀರಿಲ್ಲ. ಆರ್ಥಿಕತೆಗಿಂತಲೂ ಜನರ ಜೀವ ಮುಖ್ಯ ಎಂದು ಹೇಳಿದೆ.

ಕೋವಿಡ್ ಲಸಿಕೆ ಬೇಕಾದಷ್ಟು ಸಂಗ್ರಹಿಸಿಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹಾಗಾಗಿ ಅನೇಕ ಸ್ಥಳಗಳಲ್ಲಿ ಲಸಿಕೆ ಅಭಾವ ಕಾಡುತ್ತಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.