
ಹೈದರಾಬಾದ್: ‘ಛತ್ತೀಸಗಢದ ಬಸ್ತಾರ್ ವಲಯದ ಮುಖಂಡ ಮಾಡವಿ ಹಿಡ್ಮಾ ಅವರನ್ನು ಆಂಧ್ರಪ್ರದೇಶ ಪೊಲೀಸರು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಮಾವೋವಾದಿಗಳ ಕೇಂದ್ರ ಸಮಿತಿ ಆರೋಪಿಸಿದೆ.
ಹಿಡ್ಮಾ ಮತ್ತು ಜೊತೆಗಿದ್ದವರನ್ನು ನವೆಂಬರ್ 15ರಂದು ವಿಜಯವಾಡದಲ್ಲಿ ಬಂಧಿಸಲಾಗಿತ್ತು. ನಾಲ್ಕೈದು ದಿನ ಅವರಿಗೆ ಚಿತ್ರಹಿಂಸೆ ನೀಡಿದ ಬಳಿಕ ನಕಲಿ ಎನ್ಕೌಂಟರ್ ಮೂಲಕ ಅವರನ್ನು ಕೊಲ್ಲಲಾಯಿತು ಎಂದು ಕೇಂದ್ರ ಸಮಿತಿ ಆರೋಪಿಸಿದೆ.
ಹಿಡ್ಮಾ, ಆತನ ಪತ್ನಿ ಮದಕಂ ರಾಜೆ ಸೇರಿ ಒಟ್ಟು 6 ನಕ್ಸಲರು ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದ ಮೂಲಕ ಆಂಧ್ರಪ್ರದೇಶ ಪ್ರವೇಶಿಸುವಾಗ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟಿದ್ದಾರೆ ಎಂದು ಪೊಲೀಸರು ಹೇಳಿದ್ದರು.
ಆದರೆ, ಮಾವೋವಾದಿಗಳ ಕೇಂದ್ರ ಸಮಿತಿಯ ವಕ್ತಾರ ಅಭಯ್ ಇದನ್ನು ಅಲ್ಲಗಳೆದಿದ್ದು, ‘ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಆಂಧ್ರಪ್ರದೇಶದ ವಿಶೇಷ ತನಿಖಾ ದಳವು ಅಕ್ರಮವಾಗಿ ಹಿಡ್ಮಾ ಮತ್ತು ಸಹಚರರನ್ನು ವಶಕ್ಕೆ ಪಡೆದು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದೆ. ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ ಎನ್ನುವುದು ಸುಳ್ಳು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.