ADVERTISEMENT

ಹಿಮಾಚಲ ಪ್ರದೇಶ: ಸಿ.ಎಂ ರೇಸ್‌ನಲ್ಲಿ ಪ್ರತಿಭಾ ಸಿಂಗ್‌ ಸೇರಿ ಮೂವರ ಹೆಸರು ಮುಂಚೂಣಿ

ಪಿಟಿಐ
Published 9 ಡಿಸೆಂಬರ್ 2022, 4:00 IST
Last Updated 9 ಡಿಸೆಂಬರ್ 2022, 4:00 IST
ಕಾಂಗ್ರೆಸ್
ಕಾಂಗ್ರೆಸ್   

ನವದೆಹಲಿ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಗಾದಿಗೆ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್‌ ಅಗ್ನಿಹೋತ್ರಿ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಸುಖ್ವಿಂದರ್‌ ಸಿಂಗ್‌ ಸುಖು ಹಾಗೂ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಹೆಸರು ಮುಂಚೂಣಿಯಲ್ಲಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಾಜೀವ್‌ ಶುಕ್ಲಾ ಅವರ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ಶುಕ್ರವಾರ ನಡೆಯಲಿದೆ. ಮುಖ್ಯಮಂತ್ರಿಯ ಆಯ್ಕೆ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುವ ಒಂದು ಸಾಲಿನ ತೀರ್ಮಾನವನ್ನು ಸಭೆಯಲ್ಲಿ ಅಂಗೀಕರಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿಮ್ಲಾಕ್ಕೆ ತೆರಳುವಂತೆ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ ಬಘೇಲ್‌ ಅವರಿಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಪ್ರತಿಭಾ ಅವರು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಸಂಸದೆಯಾಗಿರುವ ಅವರ ಪರವಾಗಿ ಪಕ್ಷದ ಶಾಸಕರು ಒಲವು ತೋರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪ್ರತಿಭಾ ಅವರು, ವೀರಭದ್ರ ಸಿಂಗ್‌ ಅವರ ಪತ್ನಿ. ಈ ಅಂಶವೂ ಅವರಿಗೆ ಪೂರಕವಾಗುವ ಸಾಧ್ಯತೆ ಇದೆ.

ಪ್ರತಿಭಾ ಅವರ ಮಗ ವಿಕ್ರಮಾದಿತ್ಯ ಸಿಂಗ್‌ ಅವರು ಶಿಮ್ಲಾ ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿ ಆಯ್ಕೆಯಾಗಿದ್ದಾರೆ. ಇವರೂ ಕೂಡ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ. ಆದರೆ ಈ ಸ್ಥಾನಕ್ಕೆ ಪರಿಗಣಿಸಲು ಅವರು ತೀರಾ ಚಿಕ್ಕವರು ಎನ್ನವುದು ಹಲವರ ಅಭಿಪ್ರಾಯ.

ತಮ್ಮ ಕೆಲಸ ಪರಿಗಣಿಸಿ ಪಕ್ಷದ ಹೈಕಮಾಂಡ್‌ ತಮ್ಮನ್ನು ಆಯ್ಕೆ ಮಾಡಬಹುದು ಎಂಬ ವಿಶ್ವಾಸದಲ್ಲಿ ಮುಕೇಶ್‌, ಸುಖ್ವಿಂದರ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.