ಪ್ರೇಮಾನಂದ ಮಹಾರಾಜ
ಲಖನೌ: ಹಿಂದೂ ಸಂತ ಪ್ರೇಮಾನಂದ ಮಹಾರಾಜ ಅವರು, ಆಧುನಿಕ ಸಮಾಜದ ಮಹಿಳೆ ಮತ್ತು ಪುರುಷರ ಪಾವಿತ್ರ್ಯ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
‘ಇತ್ತೀಚಿನ ದಿನಗಳಲ್ಲಿ ನೂರು ಮಹಿಳೆಯರ ಪೈಕಿ ಇಬ್ಬರೋ ನಾಲ್ವರೋ ಮಾತ್ರ ಪವಿತ್ರರಾಗಿರುತ್ತಾರೆ ಮತ್ತು ಒಬ್ಬ ಪುರುಷನೊಟ್ಟಿಗಿನ ಸಂಬಂಧಕ್ಕೆ ಬದ್ಧರಾಗಿರುತ್ತಾರೆ. ಉಳಿದವರಿಗೆ ಬಾಯ್ಫ್ರೆಂಡ್ಸ್ ಇರುತ್ತಾರೆ’ ಎಂದು ಪ್ರೇಮಾನಂದ ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಒಬ್ಬ ಪುರುಷ ನಾಲ್ವರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದಲ್ಲಿ, ಆತ ಪತ್ನಿಯೊಂದಿಗೆ ಸಂತೃಪ್ತಿ ಹೊಂದಲು ಸಾಧ್ಯವಿಲ್ಲ. ಹಲವರೊಂದಿಗಿನ ಸಂಭೋಗಕ್ಕೆ ಆತ ಒಗ್ಗಿಕೊಳ್ಳುತ್ತಾನೆ. ಅದೇ ರೀತಿ ನಾಲ್ವರು ಪುರುಷರೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯು, ಒಬ್ಬ ಪುರುಷನ ಸಾಂಗತ್ಯದಿಂದ ಸಂತೋಷವಾಗಿರಲಾರಳು’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಪ್ರೇಮಾನಂದ ಮಹಾರಾಜ ಅವರ ಹೇಳಿಕೆಗೆ ಸಂತ ಸಮುದಾಯದಿಂದ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಅಯೋಧ್ಯೆ ಮೂಲದ ಸಂತ ಮಹಾಂತ ರಾಘು ದಾಸ್ ಅವರು, ‘ಪ್ರೇಮಾನಂದ ಮಹಾರಾಜ ಅವರು ಸತ್ಯವನ್ನೇ ಹೇಳಿದ್ದಾರೆ. ಅಶ್ಲೀಲತೆ ಹೆಚ್ಚಾಗಿದೆ...ಸಮಾಜ ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಅಯೋಧ್ಯೆ ಮೂಲದ ಮತ್ತೊಬ್ಬ ಸಂತ ಶಶಿಕಾಂತ್ ದಾಸ್ ಅವರು ‘ಪ್ರೇಮಾನಂದ ಅವರು ಗೌರವಾನ್ವಿತ ಸಂತರು. ಅವರು ಈ ರೀತಿಯ ಹೇಳಿಕೆ ನೀಡಬಾರದು. ಇಂಥ ಹೇಳಿಕೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ’ ಎಂದಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ತಾರೆಯರು ವೃಂದಾವನದ ಪ್ರೇಮಾನಂದ ಮಹಾರಾಜರ ಅನುಯಾಯಿಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.