ADVERTISEMENT

ಗಲಭೆ ಸೃಷ್ಟಿಸುವವರ ಬಗ್ಗೆ ಎಚ್ಚರ: ಮೋಹನ್ ಭಾಗವತ್

ಪಕ್ಕದ ದೇಶಗಳಲ್ಲಿನ ಜನಾಕ್ರೋಶ ಉಲ್ಲೇಖಿಸಿ ಸರ್ಕಾರಕ್ಕೆ ಸಲಹೆ ನೀಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ

ಪಿಟಿಐ
Published 2 ಅಕ್ಟೋಬರ್ 2025, 10:44 IST
Last Updated 2 ಅಕ್ಟೋಬರ್ 2025, 10:44 IST
<div class="paragraphs"><p>ಮೋಹನ್ ಭಾಗವತ್</p></div>

ಮೋಹನ್ ಭಾಗವತ್

   

–ಪಿಟಿಐ ಚಿತ್ರ

ನಾಗ್ಪುರ: ‘ಭಾರತದ ಪಕ್ಕದ ದೇಶಗಳಲ್ಲಿ ಸರ್ಕಾರ ಮತ್ತು ಸಮಾಜದ ನಡುವಿನ ಕೊಂಡಿ ಕಳಚಿದ್ದೇ ಜನಾಕ್ರೋಶಕ್ಕೆ ಕಾರಣವಾಯಿತು. ಭಾರತದಲ್ಲಿಯೂ ಅಂತಹ ಗಲಭೆಗಳನ್ನು ಸೃಷ್ಟಿಸಲು ಬಯಸುವ ಶಕ್ತಿಗಳು ದೇಶದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಗುರುವಾರ ಎಚ್ಚರಿಸಿದರು.

ADVERTISEMENT

ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಇಲ್ಲಿನ ರಶೀಂಬಾಗ್‌ನಲ್ಲಿ ಹಮ್ಮಿಕೊಂಡಿದ್ದ ರ್‍ಯಾಲಿ ಮತ್ತು ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೆರೆಯ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಸಾರ್ವಜನಿಕರ ಕೋಪವು ಹಿಂಸಾರೂಪಕ್ಕೆ ತಿರುಗಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ. ಭಾರತದಲ್ಲಿಯೂ ಈ ರೀತಿಯ ಅಶಾಂತಿ ಸೃಷ್ಟಿಸಲು ಬಯಸುವ ಶಕ್ತಿಗಳು ಸಕ್ರಿಯವಾಗಿವೆ. ಹೀಗಾಗಿ ಅತ್ಯಂತ ಎಚ್ಚರದಿಂದ ಇರಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಆ ದೇಶಗಳಲ್ಲಿನ ಗಲಭೆಗಳಿಗೆ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕ ಕಡಿತ ಮತ್ತು ಸಮರ್ಥ ಜನ ಆಧಾರಿತ ಆಡಳಿತಗಾರರ ಕೊರತೆ ಪ್ರಮುಖ ಕಾರಣವಾಗಿದೆ ಎಂದರು.

‘ಈ ರೀತಿಯ ಹಿಂಸಾತ್ಮಕ ಹೋರಾಟಗಳಿಗೆ ನಿರೀಕ್ಷಿತ ಬದಲಾವಣೆ ತರುವ ಶಕ್ತಿ ಇರುವುದಿಲ್ಲ. ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಮಾತ್ರವೇ ಅಪೇಕ್ಷಿತ ಪರಿವರ್ತನೆ ತರಲು ಸಾಧ್ಯ. ಹಿಂಸಾಮಾರ್ಗ ಆಯ್ದುಕೊಂಡರೆ, ಜಗತ್ತಿನ ಇತರ ಪ್ರಬಲ ಶಕ್ತಿಗಳು ಮಧ್ಯ ಪ್ರವೇಶಿಸುವ ಸಾಧ್ಯತೆಯಿರುತ್ತದೆ’ ಎಂದು ಅವರು ಎಚ್ಚರಿಸಿದರು.

‘ಹಿಂಸಾಚಾರದ ಘಟನೆಗಳು ಅರಾಜಕತೆಯ ವ್ಯಾಕರಣ’ ಎಂದು ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೇಳಿದ್ದರು ಎಂದು ಅವರು ಇದೇ ವೇಳೆ ಉಲ್ಲೇಖಿಸಿದರು.

‘ಈ ನೆರೆಯ ದೇಶಗಳು, ಅಲ್ಲಿನ ಸಂಸ್ಕೃತಿ ಮತ್ತು ನಾಗರಿಕ ಜತೆಗೆ ಭಾರತ ದೀರ್ಘಕಾಲೀನ ಸಂಬಂಧ ಹೊಂದಿವೆ. ಅವರೂ ನಮ್ಮ ಕುಟುಂಬದ ಭಾಗವೇ ಆಗಿದ್ದಾರೆ. ಆ ದೇಶಗಳಲ್ಲಿನ ಶಾಂತಿ, ಸ್ಥಿರತೆ, ಸಮೃದ್ಧಿ ಮತ್ತು ಯೋಗಕ್ಷೇಮವನ್ನು ನಾವೂ ಖಚಿತಪಡಿಸಿಕೊಳ್ಳಬೇಕಿದೆ’ ಎಂದರು.

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಸ್ಥಿತರಿದ್ದರು.  

ಭಾಗವತ್‌ ಭಾಷಣದ ಪ್ರಮುಖಾಂಶಗಳು...

* ಭಾರತಕ್ಕೆ ಸ್ವದೇಶಿ ಮತ್ತು ಸ್ವಾವಲಂಬನೆ ಅತ್ಯಂತ ಮುಖ್ಯ. ಜಾಗತಿಕವಾಗಿ ಪರಸ್ಪರ ಅವಲಂಬನೆ ನಮಗೆ ಕಡ್ಡಾಯ ಆಗಬಾರದು. ಸ್ವಹಿತಾಸಕ್ತಿ ಆಧರಿಸಿ ಅಮೆರಿಕ ಅಳವಡಿಸಿಕೊಂಡಿರುವ ಸುಂಕ ನೀತಿಯು ಭಾರತಕ್ಕೆ ಸವಾಲನ್ನು ಒಡ್ಡುವುದಿಲ್ಲ

* ಜಗತ್ತು ಪರಸ್ಪರ ಅವಲಂಬನೆ ಮೂಲಕ ಕಾರ್ಯನಿರ್ವಹಿಸುತ್ತಿದೆ. ನಾವು ‘ಆತ್ಮನಿರ್ಭರ’ (ಸ್ವಾವಲಂಬಿ) ಆಗುವ ಮೂಲಕ ಜಾಗತಿಕ ಏಕತೆಯನ್ನು ಅರಿತುಕೊಳ್ಳಬೇಕು. ಇತರ ದೇಶಗಳನ್ನು ಹೆಚ್ಚಾಗಿ ಅವಲಂಬಿಸದೆ, ನಮ್ಮ ಸ್ವಂತ ಇಚ್ಛೆಯಂತೆ ಕಾರ್ಯನಿರ್ವಹಿಸಬೇಕು. ಅದಕ್ಕೆ ಸ್ವದೇಶಿ ಮತ್ತು ಸ್ವಾವಲಂಬನೆಯೇ ಮೂಲ ಮಂತ್ರ

* ಸರ್ಕಾರ ತೆಗೆದುಕೊಂಡ ದೃಢ ಕ್ರಮಗಳು ಮತ್ತು ಜನರಲ್ಲಿ ಅರಿವು ಮೂಡಿದ ಪರಿಣಾಮ ನಕ್ಸಲ್‌ ಚವಳವಳಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿ, ನ್ಯಾಯ, ಸಾಮರಸ್ಯ ವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ಅಗತ್ಯ

* ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನ ವಿರುದ್ಧದ ‘ಆಪರೇಷನ್‌ ಸಿಂಧೂರ’ದ ವೇಳೆ ನಮ್ಮ ದೇಶದ ನಾಯಕತ್ವ, ದೃಢತೆ, ಸಶಸ್ತ್ರ ಪಡೆಗಳ ಶೌರ್ಯ, ಯುದ್ಧ ಸನ್ನದ್ಧತೆ, ಸಮಾಜದ ದೃಢತೆ ಪ್ರದರ್ಶಿತವಾಯಿತು. ಇದೇ ವೇಳೆ ಜಾಗತಿಕವಾಗಿ ನಮ್ಮ ಸ್ನೇಹಿತರು ಯಾರು ಮತ್ತು ಅವರು ನಮ್ಮ ಬೆಂಬಲಕ್ಕೆ ಎಷ್ಟರ ಮಟ್ಟಿಗೆ ನಿಲ್ಲಲು ಸಿದ್ಧರಿದ್ದಾರೆ ಎಂಬುದರ ಪರೀಕ್ಷೆಯೂ ನಡೆಯಿತು

* ಹವಾಮಾನ ಬದಲಾವಣೆ ಭಾರತದಲ್ಲೂ ಗೋಚರಿಸುತ್ತಿದೆ. ಅನಿರೀಕ್ಷಿತ ಮಳೆ, ಭೂಕುಸಿತ, ಹಿಮನದಿಗಳ ಒಣಗುವಿಕೆ ಮತ್ತು ಅದರ ಪರಿಣಾಮಗಳು 3–4 ವರ್ಷಗಳಿಂದ ತೀವ್ರಗೊಂಡಿವೆ. ಹಿಮಾಲಯದಲ್ಲಿನ ವಿಪತ್ತುಗಳ ಸಂಭವವನ್ನು ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬೇಕು

* ಹಿಂದೂ ಸಮಾಜವು ರಾಷ್ಟ್ರೀಯ ಏಕತೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಹಿಂದೂ ಸಮಾಜ ಭಾರತಕ್ಕೆ ಉತ್ತರದಾಯಿ ಆಗಿದೆ. ಇದು ಎಲ್ಲರನ್ನೂ ಒಳಗೊಳ್ಳುವ ಸಮಾಜ. ಇದು ‘ನಾವು ಮತ್ತು ಅವರು’ ಎಂಬ ಮನಃಸ್ಥಿತಿಯಿಂದ ಮುಕ್ತವಾಗಿದೆ. ‘ವಸುಧೈವ ಕುಟುಂಬಕಂ’ ಎಂಬ ಮಹತ್ವದ ಕಲ್ಪನೆಯನ್ನು ಎತ್ತಿಹಿಡಿಯುತ್ತದೆ

* ಸಂಘವು 100 ವರ್ಷಗಳಿಂದ ವ್ಯಕ್ತಿತ್ವ ನಿರ್ಮಾಣದ ಮೂಲಧ್ಯೇಯಕ್ಕೆ ಬದ್ಧವಾಗಿದೆ. ರಾಜಕೀಯದ ಆಸೆ, ದುರಾಸೆಗೆ ಒಳಗಾಗದೇ ತನ್ನ ಬದ್ಧತೆಯನ್ನು ಮುಂದುವರಿಸಿದೆ.

ಕೇರಳದ ಮಾಜಿ ಡಿಜಿಪಿ ಆರ್‌ಎಸ್‌ಎಸ್‌ಗೆ ಸೇರ್ಪಡೆ

ಕೊಚ್ಚಿ: ಕೇರಳದ ಮಾಜಿ ಪೊಲೀಸ್‌ ಮುಖ್ಯಸ್ಥ ಜೇಕಬ್‌ ಥಾಮಸ್‌ ಅವರು ಅ. 1ರಂದು ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಸೇರಿಸಿದರು.  ವಿಜಯದಶಮಿ ಸಂದರ್ಭದಲ್ಲಿ ಪಳ್ಳಿಕ್ಕರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಸಾಂಪ್ರದಾಯಿಕ ಸಮವಸ್ತ್ರ ಧರಿಸಿ ಅವರು ಪಾಲ್ಗೊಂಡಿದ್ದರು. 

ಈ ವೇಳೆ ಮಾತನಾಡಿದ ಮಾಜಿ ಡಿಜಿಪಿ ‘ಆರ್‌ಎಸ್‌ಎಸ್‌ನಲ್ಲಿ ಜಾತಿ ಧರ್ಮ ಭಾಷೆ ಅಥವಾ ಪ್ರಾದೇಶಿಕತೆಯ ಅಡೆತಡೆಗಳಿಲ್ಲ’ ಎಂದರು.  ಕಳೆದ ವರ್ಷ ಮಾಜಿ ಡಿಜಿಪಿ ಆರ್‌. ಶ್ರೀಲೇಖಾ (ಕೇರಳ ಕೇಡರ್‌ನ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ) ಬಿಜೆಪಿ ಸೇರಿದ್ದರು. ಅಲ್ಲದೆ ಮಾಜಿ ಡಿಜಿಪಿ ಟಿ.ಪಿ.ಸೆನ್‌ಕುಮಾರ್‌ ಅವರು ಸಹ ಸಂಘ ಪರಿವಾರದ ಜತೆ ಗುರುತಿಸಿಕೊಂಡಿದ್ದಾರೆ.

ಮೋಹನ್‌ ಭಾಗವತ್‌ ಅವರ ಭಾಷಣ ಸ್ಪೂರ್ತಿದಾಯಕವಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಆರ್‌ಎಸ್‌ಎಸ್‌ ಕೊಡುಗೆಗಳು ಮತ್ತು ಅಭಿವೃದ್ಧಿಯ ಹೊಸ ಪಥದತ್ತ ಸಾಗುತ್ತಿರುವ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾರೆ.
–ನರೇಂದ್ರ ಮೋದಿ, ಪ್ರಧಾನಿ
100 ವರ್ಷಗಳಲ್ಲಿ ಸಂಘದ ಅಸಂಖ್ಯಾತ ಸ್ವಯಂ ಸೇವಕರು ಪ್ರಚಾರಕರು ತ್ಯಾಗ ಮತ್ತು ಸಮರ್ಪಣೆ  ಪ್ರದರ್ಶಿಸಿದ್ದಾರೆ. ನಾನೂ ಸಂಘದ ಸ್ವಯಂ ಸೇವಕ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ.
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಪ್ರಧಾನಿ ಸ್ಥಾನದಲ್ಲಿ ಕುಳಿತ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ಆರ್‌ಎಸ್‌ಎಸ್‌ ಅನ್ನು ಹೊಗಳಿರುವುದು ಸ್ವತಂತ್ರ ಭಾರತಕ್ಕೇ ಕರಾಳ ದಿನ
ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.