ADVERTISEMENT

ಜ್ಞಾನವಾಪಿ ಮಸೀದಿ: ಶಿವಲಿಂಗದ ವೈಶಿಷ್ಟ್ಯ ಪತ್ತೆಗೆ ASIಗೆ ಸೂಚಿಸಲು SCಗೆ ಅರ್ಜಿ

ಪಿಟಿಐ
Published 30 ಜನವರಿ 2024, 15:50 IST
Last Updated 30 ಜನವರಿ 2024, 15:50 IST
ಜ್ಞಾನವಾಪಿ ಮಸೀದಿ ಸಂಕೀರ್ಣ
ಜ್ಞಾನವಾಪಿ ಮಸೀದಿ ಸಂಕೀರ್ಣ   

ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ವೈಶಿಷ್ಟ್ಯಗಳು ಹಾಗೂ ಅದರ ಸ್ವರೂಪವನ್ನು ಪತ್ತೆ ಮಾಡುವುದಕ್ಕಾಗಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ಗೆ (SC) ಅರ್ಜಿ ಸಲ್ಲಿಸಿದ್ದಾರೆ.

‘ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಮುಂದೂಡಿ 2023ರ ಮೇ 19ರಂದು ನೀಡಿದ್ದ ಆದೇಶ, ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ಕಾಲಮಾನ ಪತ್ತೆಗಾಗಿ ಅಲಹಾಬಾದ್‌ ಹೈಕೋರ್ಟ್‌ ಕಳೆದ ವರ್ಷ ಮೇ 12ರಂದು ನೀಡಿದ್ದ ನಿರ್ದೇಶನದಂತೆ ನಡೆಯಬೇಕಿದ್ದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಮುಂದೂಡಿ ತಾನು ನೀಡಿದ್ದ ಆದೇಶವನ್ನು ತೆರವುಗೊಳಿಸುವಂತೆಯೂ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

‘ಶಿವಲಿಂಗ ಸುತ್ತಲೂ ನಿರ್ಮಿಸಿರುವ ಕೃತಕ/ಆಧುನಿಕ ಗೋಡೆಗಳು ಹಾಗೂ ನೆಲಹಾಸನ್ನು ತೆರವು ಮಾಡಿ, ವೈಜ್ಞಾನಿಕ ಪರೀಕ್ಷೆ ಕೈಗೊಂಡಾಗ ಮಾತ್ರ ಅದರ ನಿಖರವಾದ ಸ್ವರೂಪವನ್ನು ಪತ್ತೆ ಮಾಡಲು ಸಾಧ್ಯ. ಇದಕ್ಕಾಗಿ ಈಗ ಮುಚ್ಚಲಾಗಿರುವ ಪ್ರದೇಶದ ಉತ್ಖನನ ನಡೆಸಬೇಕು ಹಾಗೂ ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಿ ಸಮೀಕ್ಷೆ ನಡೆಸಬೇಕು’ ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.

ADVERTISEMENT

ಈ ಕುರಿತು ವಕೀಲ ವಿಷ್ಣುಶಂಕರ್‌ ಜೈನ್‌ ಅವರ ಮೂಲಕ ಅರ್ಜಿಗಳನ್ನು ಸಲ್ಲಿಸಿರುವ ಮಹಿಳೆಯರು, ಕೋರ್ಟ್‌ ನಿಗದಿಪಡಿಸುವ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ASIಗೆ ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.

ಕಾರ್ಬನ್ ಡೇಟಿಂಗ್‌ನಂತ ವೈಜ್ಞಾನಿಕ ಪದ್ಧತಿಗಳ ಮೂಲಕ ಶಿವಲಿಂಗ ಎನ್ನಲಾದ ಆಕೃತಿಯ (ಮುಸ್ಲೀಮರು ಇದನ್ನು ನೀರಿನ ಕಾರಂಜಿ ಎಂದು ಕರೆಯುತ್ತಿದ್ದಾರೆ) ನಿಜವಾದ ಕಾಲವನ್ನು ಅರಿಯಬೇಕು ಎಂದು ವಕೀಲ ವಿಷ್ಣು ಶಂಕರ್ ಜೈನ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ASIಗೆ ಸೂಚಿಸುವಂತೆಯೂ ಕೋರಿದರು.

ವಾರಾಣಸಿ ನ್ಯಾಯಾಲಯವು ASI ವರದಿಯನ್ನು ಉಭಯ ಪಕ್ಷಗಾರರಿಗೆ ನೀಡಿದ ಮರುದಿನವೇ ಹಿಂದೂಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ, ಹಿಂದೂ ದೇಗುಲದ ಮೇಲೆ ಮಸೀದಿ ಕಟ್ಟಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.