
ಇಂಫಾಲ: ಮಣಿಪುರದ ಉಖರುಲ್ ಜಿಲ್ಲೆಯಲ್ಲಿ ತಾಂಗಖುಲ ನಾಗಾ ಸಮುದಾಯದ ಸದಸ್ಯರೊಬ್ಬರ ಮೇಲೆ ನಡೆದ ಹಲ್ಲೆ ಸಂಬಂಧ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಂಗಳವಾರ ಬೆಳಿಗ್ಗೆ ಶಸ್ತ್ರಸಜ್ಜಿತ ಬಂಡುಕೋರರು ಪಾಳುಬಿದ್ದ ಹಲವು ಮನೆಗಳಿಗೆ ಬೆಂಕಿ ಹಚ್ಚಿ, ಗುಂಡು ಹಾರಿಸಿದ್ದಾರೆ.
ರಾಜ್ಯ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಉಖರುಲ ಜಿಲ್ಲೆಯಲ್ಲಿ ಬ್ರಾಡ್ಬ್ಯಾಂಡ್, ವಿಪಿಎನ್ ಮತ್ತು ವಿಎಸ್ಎಟಿ ಒಳಗೊಂಡಂತೆ ಇಂಟರ್ನೆಟ್ ಸೇವೆಗಳನ್ನು ಐದು ದಿನಗಳವರೆಗೆ ಸ್ಥಗಿತಗೊಳಿಸಿ ಆದೇಶಿಸಿದೆ.
ತಾಂಗಖುಲ್ ನಾಗಾ ಸಂಘಟನೆಗಳಾದ ಕಾಥೊ ಲೋಂಗ್ ಹಾಗೂ ಕಾಥೊ ಕಟಮ್ನಾವೊ ಲೋಂಗ್ ಉಖರುಲ್ ಮತ್ತು ಕಾಮ್ಜೋಂಗ್ ಜಿಲ್ಲೆಗಳಲ್ಲಿ ಕುಕಿ ಸಮುದಾಯದವರ ಓಡಾಟಕ್ಕೆ ನಿರ್ಬಂಧ ವಿಧಿಸಿದ ಮರುದಿನವೇ, ಲಿಟನ್ ಸಾರೈಖೋಂಗ್ ಪ್ರದೇಶದಲ್ಲಿ ಹಲವು ಸುತ್ತಿನ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ.
‘ಈ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯನ್ನು ತಡೆಯುವಲ್ಲಿ ಭದ್ರತಾ ಪಡೆಗಳು ವಿಫಲವಾಗಿವೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ 21 ಮನೆಗಳು ಸುಟ್ಟುಹೋಗಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.– ಗೋವಿಂದಾಸ್ ಕೋಂಥೌಜಾಮ್, ಗೃಹ ಸಚಿವ
ಗುಡ್ಡಗಾಡು ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಕುಕಿ ಮತ್ತು ತಾಂಗಖುಲ ನಾಗಾ ಸಮುದಾಯದ ನೂರಾರು ಮಂದಿ ಕಳೆದ ಎರಡು ದಿನಗಳಿಂದ ಲಿಟನ್ ಸಾರೈಖೋಂಗ್ ಹಾಗೂ ನೆರೆಯ ಕುಕಿ ಗ್ರಾಮಗಳನ್ನು ತೊರೆದು ಕಾಂಗ್ಪೋಕ್ಪಿ ಮತ್ತು ಉಖರುಲ ಜಿಲ್ಲೆಗಳ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಕುಕಿ ಸಮುದಾಯದವರು ಹೆಚ್ಚಾಗಿರುವ ಕಾಂಗ್ಪೋಕ್ಪಿ ಜಿಲ್ಲೆಯ ಮೋಟಬಂಗ್ ಮತ್ತು ಸೈಕುಲ್ನ ಕೆಲವೆಡೆ ಅನೇಕರು ಆಶ್ರಯ ಪಡೆದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.