
ನವದೆಹಲಿ: ಗೃಹಿಣಿಯ ಶ್ರಮವು ಸಂಪಾದನೆ ಮಾಡುವ ಸಂಗಾತಿಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಆಕೆಯ ಕೊಡುಗೆಯನ್ನು ಉಪೇಕ್ಷೆ ಮಾಡುವುದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಪತಿಯಿಂದ ದೂರವಾದ ಪತ್ನಿಗೆ ಪರಿಹಾರ ನೀಡುವ ಕುರಿತ ಅರ್ಜಿಯ ವಿಚಾರಣೆ ವೇಳೆ, ‘ಗೃಹಿಣಿಯ ಕೊಡುಗೆಯನ್ನು ತಾತ್ಸಾರ ಮಾಡುವುದು ಅವಾಸ್ತವಿಕ ಮತ್ತು ಅನ್ಯಾಯ’ ಕೋರ್ಟ್ ಹೇಳಿತು.
ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು, ‘ಪತ್ನಿಯ ಸಂಬಳರಹಿತ ಉದ್ಯೋಗವನ್ನು ಪ್ರಯೋಜನಕ್ಕಿಲ್ಲದ್ದು ಅಥವಾ ಉದ್ದೇಶಪೂರ್ವಕ ಅವಲಂಬನೆ ಎನ್ನಲಾಗದು. ಹಣ ಸಂಪಾದನೆ ಮಾತ್ರವಲ್ಲದೆ ಮನೆ ಮತ್ತು ವೈವಾಹಿಕ ಸಂಬಂಧಕ್ಕೆ ಗೃಹಿಣಿಯ ಕೊಡುಗೆಯ ಆರ್ಥಿಕ ಮೌಲ್ಯವನ್ನೂ ಕಾನೂನು ಗುರುತಿಸಬೇಕು’ ಎಂದು ಅಭಿಪ್ರಾಯಪಟ್ಟರು.
‘ಹಣ ಸಂಪಾದನೆ ಮಾಡದ ಸಂಗಾತಿಯು ‘ಆಲಸಿ’ ಎಂಬ ಗ್ರಹಿಕೆಯು ಮನೆಗೆಲಸಕ್ಕೆ ಆಕೆ ನೀಡುವ ಕೊಡುಗೆಯನ್ನು ನಿರ್ಲಕ್ಷಿಸಿರುವುದನ್ನು ಸಂಕೇತಿಸುತ್ತದೆ’ ಎಂದು ಹೇಳಿದರು.
ದಂಪತಿ 2012ರಲ್ಲಿ ವಿವಾಹವಾಗಿದ್ದರು. 2020ರಲ್ಲಿ ಪತಿ–ಪತ್ನಿ ದೂರವಾಗಿದ್ದು, ಪರಿಹಾರ ನೀಡುವಂತೆ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಮಹಿಳೆಗೆ ಪರಿಹಾರ ನೀಡಲು ನಿರಾಕರಿಸಿತ್ತು.
‘ಲೈಂಗಿಕ ಸಂಬಂಧದ ನಂತರ ಮದುವೆ ನಿರಾಕರಣೆ ಅಪರಾಧ’
ನವದೆಹಲಿ: ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ ನಂತರ ಗಣಕೂಟ ಹೊಂದಾಣಿಕೆಯಾಗಲಿಲ್ಲ ಎಂಬ ಕಾರಣಕ್ಕಾಗಿ ಮದುವೆಯಾಗಲು ನಿರಾಕರಿಸುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತು. ಇಂಥ ವರ್ತನೆಯ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಹೇಳಿತು. ಆರೋಪಿಗೆ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಜಾಮೀನು ನಿರಾಕರಿಸಿದರು. ಆರೋಪಿಯು ಜನವರಿ 4ರಿಂದ ನ್ಯಾಯಾಂಗ ವಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.