ಹೈದರಾಬಾದ್: ‘ನಾನು ಶಿವನ ಅವತಾರ; ಕೊರೊನಾ ನನ್ನಿಂದ ವ್ಯಾಪಿಸಿದೆ, ಚೀನಾದಿಂದಲ್ಲ. ನಾನೇ ಇದನ್ನು ಭೂಮಿಗೆ ಕಳುಹಿಸಿದ್ದೇನೆ ’
– ತನ್ನಿಬ್ಬರು ಪುತ್ರಿಯರನ್ನು ಕೊಂದಿರುವುದಾಗಿ ಹೇಳಿರುವ ಮದನಪಲ್ಲಿಯ ಪದ್ಮಜಾ ಅವರು, ಪೊಲೀಸರು ನಡೆಸಿದ ವಿಚಾರಣೆ ವೇಳೆ ಹೇಳಿದ ಮಾತುಗಳಿವು.
‘ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ’ ಎಂದು ನಂಬಿ ತಮ್ಮ ಇಬ್ಬರು ಪುತ್ರಿಯರಾದ ಅಲೇಖ್ಯಾ (27) ಹಾಗೂ ಸಾಯಿ ದಿವ್ಯಾ (22) ಅವರನ್ನು ಕೊಂದಿದ್ದಕ್ಕಾಗಿ ಡಾ.ಪುರುಷೋತ್ತಮ ನಾಯ್ಡು ಹಾಗೂ ಪದ್ಮಜಾ ದಂಪತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ನನ್ನ ಗಂಟಲಿನಲ್ಲಿ ಹಾಲಾಹಲ ಇದೆ. ಹೀಗಾಗಿ ನನ್ನನ್ನು ಪರೀಕ್ಷೆಗೆ ಒಳಗಪಡಿಸುವುದು ಬೇಡ. ನನ್ನ ಪರೀ್ಕ್ಷೆಗೆ ಮುಂದಾಗುವ ಮೂಲಕ ನನ್ನನ್ನು ಅವಮಾನಿಸಬೇಡಿ. ಹಾಗೇನಾದರೂ ಮಾಡಿದರೆ ನನ್ನ ಶಾಪಕ್ಕೆ ಗುರಿಯಾಗುತ್ತೀರಿ’ ಎಂದೂ ಪದ್ಮಜಾ ವೈದ್ಯರಿಗೆ ಹೇಳಿದ್ದಾರೆ.
‘ಕೋವಿಡ್ ಪಿಡುಗು ಮಾರ್ಚ್ನಲ್ಲಿ ಅಂತ್ಯವಾಗುವುದು. ಈ ವೈರಸ್ ವಿರುದ್ಧ ಯಾವುದೇ ಲಸಿಕೆಗಳೂ ಬೇಡ. ಹೀಗಾಗಿ ಎಲ್ಲಾ ಔಷಧಿ ತಯಾರಕ ಕಂಪನಿಗಳನ್ನು ಮುಚ್ಚಬೇಕಾಗುತ್ತದೆ’ ಎಂದೂ ಪದ್ಮಜಾ ಘೋಷಿಸಿದ್ದಾರೆ.
ಒಂದು ಹಂತದಲ್ಲಿ ಪದ್ಮಜಾ ಅವರನ್ನು ಸಮಾಧಾನಪಡಿಸಲು ಪತಿ ಪುರುಷೋತ್ತಮ ಪ್ರಯತ್ನಿಸಿದಾಗ, ‘ನನ್ನನ್ನು ನಿಯಂತ್ರಿಸಲು ಪ್ರಯತ್ನಿಸಬೇಡ. ಈಗ ನೀನು ನನ್ನ ಪತಿಯಲ್ಲ’ ಎಂದು ಪದ್ಮಜಾ ಆರ್ಭಟಿಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.