ADVERTISEMENT

ಕಾಶ್ಮೀರದ ವಿಚಾರದಲ್ಲಿ ಕೆಲವು ವಿಚಾರಗಳು ಬದಲಾಗುವುದೇ ಇಲ್ಲ ಎಂಬಂತಾಗಿದ್ದವು

ಏಜೆನ್ಸೀಸ್
Published 8 ಆಗಸ್ಟ್ 2019, 15:22 IST
Last Updated 8 ಆಗಸ್ಟ್ 2019, 15:22 IST
   

ನವದೆಹಲಿ: ಈ ದೇಶದಲ್ಲಿ ಯಾವುದೂ ಬದಲಾಗುವುದೇ ಇಲ್ಲ ಎಂಬ ಭಾವನೆ ನಮ್ಮಲ್ಲಿ ಕೆಲವೊಮ್ಮೆ ಪ್ರಬಲವಾಗಿಬಿಡುತ್ತೆ. 370ನೇ ವಿಧಿಯ ಬಗ್ಗೆಯೂ ಹೀಗೆಯೇ ಆಗಿತ್ತು.ಈಗ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೊಸ ಶಕೆ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದರು. ಈ ವೇಳೆ ಅವರು ಜಮ್ಮು ಕಾಶ್ಮೀರದ ಬೆಳವಣಿಗೆಗಳನ್ನು ಪ್ರಸ್ತಾಪಿಸಿದರು.

ಈ ದೇಶದಲ್ಲಿ ಯಾವುದೂ ಬದಲಾಗುವುದಿಲ್ಲ ಎನ್ನುವ ಭಾವನೆ ನಮ್ಮಲ್ಲಿ ಕೆಲವೊಮ್ಮೆ ಪ್ರಬಲವಾಗಿಬಿಡುತ್ತೆ. 370ನೇ ವಿಧಿಯ ಬಗ್ಗೆಯೂ ಹೀಗೆಯೇ ಆಗಿತ್ತು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ ಅದರಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ. 370ನೇ ವಿಧಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರ ಬದುಕಿಗೆ ಏನು ಲಾಭವಾಯಿತು? ಈ ಬಗ್ಗೆ ಎಂದಾದರೂ ಗಂಭೀರ ಚರ್ಚೆಯಾಗಿದ್ದು ಉಂಟೆ?. ಈ ವಿಧಿಯಿಂದ ಕುಟುಂಬವಾದ, ಉಗ್ರವಾದ ಮತ್ತು ವ್ಯವಸ್ಥೆಯಲ್ಲಿ ಭ್ರಷ್ಟಾಚಾರಗಳು ಬೆಳೆದವು. ಅಷ್ಟು ಬಿಟ್ಟರೆ ಬೇರೇನೂ ಆಗಲೇ ಇಲ್ಲ. ಪಾಕಿಸ್ತಾನವು ಈ ವಿಧಿಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿತು.ಸಾವಿರಾರು ಕುಟುಂಬಗಳು ನಿರ್ವಸಿತವಾದವು. ಅಲ್ಲಿನ ಜನರು ತಮ್ಮ ಪ್ರಾಣಗಳನ್ನು ಕೊಡಬೇಕಾಯಿತು. ಸ್ವಂತ ನೆಲದಿಂದ ಅವರು ನಿರಾಶ್ರಿತರಾಗಿ ಹೊರಗೆ ಹೋಗಬೇಕಾಯಿತು. ಈ ದೇಶದ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಲೇ ಇರಲಿಲ್ಲ ಎಂದು ಮೋದಿ ಹೇಳಿದ್ಧಾರೆ.
ಸಂವಿಧಾನದ 370ನೇ ವಿಧಿ ರದ್ದಾಗುವ ಮೂಲಕ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೊಸ ಶಕೆ ಆರಂಭವಾಗಿದೆ. ಕಾಶ್ಮೀರದ ಜನರ ಜೊತೆಗೆ ದೇಶದ ಎಲ್ಲ ನಾಗರಿಕರನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಇದು ನಮ್ಮ ನಾಯಕರಾಗಿದ್ದ ವಾಜಪೇಯಿ ಸೇರಿದಂತೆ ಸಾವಿರಾರು ಜನರ ಕನಸಾಗಿತ್ತು ಎಂದು ಅವರು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ಪ್ರಮುಖ ಕಂಪನಿಗಳು, ಖಾಸಗಿ ಕಂಪನಿಗಳಲ್ಲಿಯೂ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಯುವಜನರಿಗೆ ಉದ್ಯೋಗ ಸಿಗುವಂತೆ ಮಾಡಲು ವ್ಯವಸ್ಥೆ ಮಾಡುತ್ತೇವೆ. ಉದ್ಯೋಗ ರ್‍ಯಾಲಿಗಳನ್ನು ಆಯೋಜಿಸುತ್ತೇವೆ. ಪ್ರಧಾನ ಮಂತ್ತಿ ವಿದ್ಯಾರ್ಥಿ ವೇತನ ಯೋಜನೆಯನ್ನು ಆದ್ಯತೆಯ ಮೇರೆಗೆ ವಿಸ್ತರಿಸುತ್ತೇವೆ. ಕಂದಾಯ ಸೋರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತೆವೆ ಎಂದು ಮೋದಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.