ADVERTISEMENT

ಬಾಲಾಕೋಟ್ ವಾಯುದಾಳಿ ನಡೆದ ದಿನ ಇಡೀ ರಾತ್ರಿ ಎಚ್ಚರವಿದ್ದರು ಮೋದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 11:57 IST
Last Updated 5 ಏಪ್ರಿಲ್ 2019, 11:57 IST
   

ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‍ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ಮಾಡಿದ ದಿನ ಪ್ರಧಾನಿ ನರೇಂದ್ರ ಮೋದಿ ಇಡೀ ರಾತ್ರಿ ನಿದ್ದೆ ಮಾಡದೆ ಎಚ್ಚರವಿದ್ದರು. ಈ ವಿಷಯವನ್ನು ಮೋದಿಯವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಎಬಿಪಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಮುಂಜಾನೆ 3.40ಕ್ಕೆ ಸೇನೆಯ ಕಾರ್ಯಾಚರಣೆ ಮುಗಿದು ಸೇನೆ ಸುರಕ್ಷಿತವಾಗಿ ವಾಪಸ್ ಬಂದಿದೆ ಎಂದು ಮಾಹಿತಿ ಸಿಕ್ಕಿತು.ನಾನು ನಿದ್ದೆ ಮಾಡಲಿಲ್ಲ, ಈ ಕಾರ್ಯಾಚರಣೆ ಬಗ್ಗೆ ಏನಾದರೂ ಸುದ್ದಿಯಿದೆಯೇ ಎಂದು ನಾನು ಇಂಟರ್ನೆಟ್‍ನಲ್ಲಿ ಹುಡುಕಾಡುತ್ತಾ ಕುಳಿತೆ.

ಬೆಳಗ್ಗೆ ಸರಿಸುಮಾರು 5.30ರ ಹೊತ್ತಿಗೆ ಪಾಕಿಸ್ತಾನದ ಅಧಿಕೃತ ಟ್ವಿಟರ್ಖಾತೆ ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿತು. ಇದಾದನಂತರ ನಾನು ಬೆಳಗ್ಗೆ 7 ಗಂಟೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದೆ ಎಂದಿದ್ದಾರೆ ಮೋದಿ.

ಫೆ. 25ರಂದು ನಡೆಸಿದ ಬಾಲಾಕೋಟ್ ದಾಳಿ ಬಗ್ಗೆ ನಿಮಗೆ ಕ್ಷಣ ಕ್ಷಣಕ್ಕೂ ಮಾಹಿತಿ ಸಿಗುತ್ತಿತ್ತೇ ಎಂದು ಮೋದಿಯವರಲ್ಲಿ ಕೇಳಿದಾಗ, ಯಾವುದೇ ಪ್ರದೇಶದಲ್ಲಿ ಬಸ್ ಅಪಘಾತವಾದರೂ ಅದರ ಬಗ್ಗೆ ನಾನು ಮಾಹಿತಿ ಪಡೆಯುತ್ತಿರುತ್ತೇನೆ. ಅಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದರೆ ನಾನು ಹೇಗೆ ನಿದ್ದೆ ಮಾಡಲಿ?

ADVERTISEMENT

ಆದಾಗ್ಯೂ, ವಿಪಕ್ಷಗಳು ಕಾರ್ಯಾಚರಣೆ ಬಗ್ಗೆ ಸಾಕ್ಷ್ಯ ಕೇಳುತ್ತಿವೆ ಅಲ್ಲವೇ ಎಂದು ಕೇಳಿದಾಗ, ಪಾಕಿಸ್ತಾನದ ಟ್ವೀಟ್ ಇದಕ್ಕೆ ಸಾಕ್ಷ್ಯ. ನಾವು ಅವರು ಪ್ರಚಾರ ಮಾಡಿದಂತೆ ಕಾರ್ಯಾಚರಣೆ ಬಗ್ಗೆ ಪ್ರಚಾರ ಮಾಡಿಲ್ಲ.ಪಾಕಿಸ್ತಾನದವರು ಈ ಕಾರ್ಯಾಚರಣೆ ಬಗ್ಗೆ ಹೇಳಲ್ಲ ಯಾಕೆಂದರೆ ಅವರು ಹೀಗೆ ಹೇಳಿದರೆ ದಾಳಿ ನಡೆದಿರುವುದು ಉಗ್ರರ ಶಿಬಿರದ ಮೇಲೆ ದಾಳಿ ನಡೆದಿದೆ ಎಂಬುದನ್ನು ಅವರು ಒಪ್ಪಲೇ ಬೇಕು.

ಇನ್ನು ಮುಂದೆ ಪಾಕ್ ಜತೆಗಿನ ಸಂಬಂಧ ಉತ್ತಮವಾಗಲಿದೆಯೇ ಎಂದು ಕೇಳಿದಾಗ, ಅದಕ್ಕಾಗಿ ಅವರು ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ಮೋದಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.