ಸೋನಮ್ ಹಾಗೂ ರಾಜಾ ರಘುವಂಶಿ
ಇಂದೋರ್: ಮೇಘಾಲಯದ ಹನಿಮೂನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ಮತ್ತು ಆಕೆಯ ಪೋಷಕರು ನನ್ನ ಮಗನಿಗೆ ಮಾಟ–ಮಂತ್ರ ಮಾಡಿಸಿರಬಹುದು ಎಂದು ರಾಜಾ ರಘುವಂಶಿ ತಂದೆ ಅಶೋಕ್ ರಘುವಂಶಿ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜಾ ರಘುವಂಶಿ ಅವರ ಹದಿಮೂರನೇ ದಿನದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಸೋನಮ್ ಸೂಚನೆಯಂತೆ ರಾಜಾ ನಮ್ಮ ಮನೆಯ ಮುಖ್ಯ ದ್ವಾರಕ್ಕೆ ಕೆಲವೊಂದು ವಸ್ತುಗಳನ್ನು ಬಂಡಲ್ ಅನ್ನು ಕಟ್ಟಿದ್ದ. ಹೀಗೆ ಮಾಡುವುದರಿಂದ ಮನೆಯವರಿಗೆ ಬೇರೆಯವರ ಕೆಟ್ಟ ದೃಷ್ಠಿ ಬೀರುವುದಿಲ್ಲ’ ಎಂದು ಆಕೆ ಹೇಳಿಕೊಂಡಿದ್ದಾಳೆಂದು ಅಶೋಕ್ ರಘುವಂಶಿ ತಿಳಿಸಿದ್ದಾರೆ.
ರಾಜಾ ಸಾವಿನಿಂದಾಗಿ ಸೋನಮ್ಗೆ ಮಾಟ–ಮಂತ್ರದಲ್ಲಿ ನಂಬಿಕೆ ಇರಬಹುದು ಎಂದು ಅನಿಸುತ್ತದೆ. ಮಗನ ಸಾವಿಗೂ ಮಾಟ–ಮಂತ್ರವೇ ಕಾರಣವಾಗಿರಬಹುದು. ಆತನ ಹತ್ಯೆ ಬಳಿಕ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಲಾಗಿದ್ದ ಬಂಡಲ್ ಅನ್ನು ತೆಗೆದುಹಾಕಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ರಾಜಾ ರಘುವಂಶಿ ಅವರ ತಾಯಿ ಉಮಾ ಮಾತನಾಡಿ, ‘ನನ್ನ ಮಗ ಮತ್ತು ಸೋನಮ್ ಜ್ಯೋತಿಷಿ ಸೂಚಿಸಿದ ಶುಭ ಮುಹೂರ್ತದ ಪ್ರಕಾರವೇ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಸೋನಮ್ ಮದುವೆಯಾದ ಬಳಿಕ ಕೇವಲ ನಾಲ್ಕು ದಿನ ಮಾತ್ರ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದಳು. ಬಳಿಕ ಆಕೆಯನ್ನು ಸಂಪ್ರದಾಯದಂತೆ ತವರು ಮನೆಗೆ ಕಳುಹಿಸಲಾಗಿತ್ತು. ಆದರೆ, ಆಕೆ ನನ್ನ ಮಗನನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸುತ್ತಾಳೆ ಎಂದು ಊಹಿಸಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.
ರಾಜಾ ರಘುವಂಶಿ, ಸೋನಮ್ ಮೇ 1ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ಮೇಘಾಲಯಕ್ಕೆ ತೆರಳಿದ್ದಾಗ ಮೇ 23ರಿಂದ ದಂಪತಿ ನಾಪತ್ತೆಯಾಗಿದ್ದರು. ಜೂನ್ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್ ಸಮೀಪದ ಜಲಪಾತದ ಕಮರಿಯಲ್ಲಿ ಸಿಕ್ಕಿತ್ತು.
ರಘುವಂಶಿ ಅವರ ಹತ್ಯೆ ನಡೆದಿದ್ದು, ಹತ್ಯೆಗೆ ಸಂಚು ನಡೆಸಿದ ಆರೋಪದ ಮೇಲೆ ಸೋನಮ್, ಆಕೆಯ ಪ್ರಿಯಕರ ರಾಜ್, ವಿಶಾಲ್, ಆಕಾಶ್, ಆನಂದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.