ADVERTISEMENT

ಮುಖ್ಯಮಂತ್ರಿ ನಿವಾಸ ತೊರೆದಿದ್ದೇನೆ, ಸಂಕಲ್ಪವನ್ನಲ್ಲ: ಮಹಾರಾಷ್ಟ್ರ ಸಿಎಂ ಉದ್ಧವ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 13:32 IST
Last Updated 24 ಜೂನ್ 2022, 13:32 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ   

ಮುಂಬೈ: ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ 'ವರ್ಷಾ' ತೊರೆದು ತಮ್ಮ ಸ್ವಂತ ನಿವಾಸ 'ಮಾತೋಶ್ರೀ'ಗೆ ತೆರಳಿರುವ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ, ತಾವು ಸಿಎಂ ಗೃಹ ಕಚೇರಿಯನ್ನು ತೊರೆದಿರಬಹುದು, ಸಂಕಲ್ಪಗಳನ್ನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಅವರು, ಪಕ್ಷದ ಜಿಲ್ಲಾ ಘಟಕಗಳ ನಾಯಕರೊಂದಿಗೆ ವರ್ಚುವಲ್‌ ಆಗಿ ಮಾತುಕತೆ ನಡೆಸಿದ್ದಾರೆ.

ದಾದರ್‌ನಲ್ಲಿರುವ ಶಿವಸೇನಾ ಭವನದಲ್ಲಿ ಮಾತನಾಡಿರುವ ಠಾಕ್ರೆ, 'ಈ ಹಿಂದೆಯೂ ಎದುರಾದ ಬಂಡಾಯಗಳ ನಡುವೆ ಪಕ್ಷವು ಎರಡು ಬಾರಿ ಅಧಿಕಾರಕ್ಕೆ ಏರಿದೆ. ನಾನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ'ವನ್ನು ತೊರೆದಿರಬಹುದು. ಆದರೆ, ನನ್ನ ಸಂಕಲ್ಪಗಳನ್ನಲ್ಲ' ಎಂದು ಹೇಳಿದ್ದಾರೆ. ಹಾಗೆಯೇ, ಕಳೆದ ಎರಡೂವರೆ ವರ್ಷದಿಂದ ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧ ಮತ್ತು ಅನಾರೋಗ್ಯದ ವಿರುದ್ಧ ಹೋರಾಟ ನಡೆಸಿದ್ದೇನೆ. ಆದರೆ, ಈಗ ವಿರೋಧಿಗಳು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟ ಅಧಿಕಾರಲ್ಲಿದೆ. ಸದ್ಯ ಶಿವಸೇನಾದಲ್ಲಿ ಬಿಕ್ಕಟ್ಟು ಬಿಗಡಾಯಿಸಿದೆ. ಶಾಸಕ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದಕನಿಷ್ಠ 38 ಶಾಸಕರು ಮತ್ತು 10 ಪಕ್ಷೇತರರು ಅಸ್ಸಾಂನ ಗುವಾಹಟಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ.

ಹೀಗಾಗಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.

ಬಂಡಾಯ ಶಾಸಕರ ಅನರ್ಹತೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶಿವಸೇನಾ ನಾಯಕ ಸಂಜತ್ ರಾವುತ್ ಹೇಳಿದ್ದಾರೆ. ಶಿವಸೇನಾದ ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ, ರಾವುತ್‌ ಹೇಳಿಕೆಗೆ ತಿರುಗೇಟು ನೀಡಿದ್ದು,'ನಾವೇ ನಿಜವಾದ ಶಿವಸೇನಾ, ನನ್ನನ್ನು ಹಾಗೂ ಬೆಂಬಲಿಗರನ್ನು ಅನರ್ಹಗೊಳಿಸುವ ಬೆದರಿಕೆಗಳಿಗೆ ಹೆದರುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.