ADVERTISEMENT

ಹೆಲಿಕಾಪ್ಟರ್ ದುರಂತ: ತನಿಖೆಗೆ ಕಾಲಾವಕಾಶ ಬೇಕು ಎಂದ ಐಎಎಫ್ ಮುಖ್ಯಸ್ಥ ಚೌಧರಿ

ಪಿಟಿಐ
Published 18 ಡಿಸೆಂಬರ್ 2021, 15:17 IST
Last Updated 18 ಡಿಸೆಂಬರ್ 2021, 15:17 IST
ವಿವೇಕ್ ರಾಮ್ ಚೌಧರಿ
ವಿವೇಕ್ ರಾಮ್ ಚೌಧರಿ   

ಹೈದರಾಬಾದ್: ‘ತಮಿಳುನಾಡಿನಲ್ಲಿ ಈಚೆಗೆ ನಡೆದ ಹೆಲಿಕಾಪ್ಟರ್ ಪತನ ಪ್ರಕರಣದ ತನಿಖೆಗಾಗಿ ನ್ಯಾಯಾಲಯವು ಸೇನೆಯ ಮೂರೂ ಪಡೆಯ ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವನ್ನು ನೇಮಕ ಮಾಡಿದ್ದು, ಪ್ರಾಮಾಣಿಕವಾಗಿ ತನಿಖೆ ನಡೆಯುತ್ತಿದೆ. ಪ್ರತಿಯೊಂದು ಕೋನದಲ್ಲೂ ವಿಚಾರಣೆ ನಡೆಲಾಗುತ್ತಿದೆ. ಇದಕ್ಕಾಗಿ ಕೆಲ ಸಮಯ ಹಿಡಿಯುತ್ತದೆ’ ಎಂದು ವಾಯುಪಡೆಯ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ದುಂಡಿಗಲ್‌ನಲ್ಲಿನ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹೆಲಿಕಾಪ್ಟರ್ ದುರಂತಕ್ಕೆ ಕಾರಣಗಳೇನು? ಮುಂದಿನ ಪರಿಹಾರ ಕ್ರಮಗಳು ಯಾವುವು ಎಂಬುದರ ಕುರಿತು ತರಾತುರಿಯಾಗಿ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯವು ನೇಮಿಸಿದ ತನಿಖಾ ತಂಡವು ಈ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣವಾಗದ ಹೊರತು ಪೂರ್ವಭಾವಿಯಾಗಿ ನಾನು ಯಾವುದೇ ವಿವರ, ಮಾಹಿತಿಯನ್ನು ಹಂಚಿಕೊಳ್ಳಲು ಬರುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಸೇನಾ ನಿಯೋಜನೆ ಮುಂದುವರಿಕೆ

ADVERTISEMENT

‘ನೆರೆಯ ಚೀನಾದೊಂದಿಗಿನ ಬಿಕ್ಕಟ್ಟು ಇನ್ನೂ ಬಗೆಹರಿಯದ ಕಾರಣ ಭಾರತೀಯ ವಾಯುಪಡೆಯು ಪೂರ್ವ ಲಡಾಕ್‌ನಲ್ಲಿ ಸೇನಾ ನಿಯೋಜನೆಯನ್ನು ಮುಂದುವರಿಸಿದ್ದು, ಅಗತ್ಯಬಿದ್ದರೆ ಸೈನಿಕರ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧ’ ಎಂದು ವಾಯುಪಡೆಯ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಶನಿವಾರ ಹೇಳಿದ್ದಾರೆ.

‘ಗಡಿ ಭಾಗದಲ್ಲಿ ಬಿಕ್ಕಟ್ಟು ಇನ್ನೂ ಮಂದುವರಿದಿದೆ. ಪೂರ್ವ ಲಡಾಕ್‌ನ ಕೆಲವೆಡೆ ಮಾತ್ರ ಸೇನೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ, ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಂಡಿಲ್ಲ. ಅಗತ್ಯಬಿದ್ದರೆ ಮತ್ತಷ್ಟುಸೇನೆಯನ್ನು ನಿಯೋಜಿಸಲಾಗುವುದು. ಈ ಪ್ರದೇಶದಲ್ಲಿ ನಮಗೆ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ’ ಎಂದರು.

ಪೂರ್ವ ಲಡಾಕ್‌ ಪ್ರದೇಶದಲ್ಲಿ ಚೀನಾದೊಂದಿಗಿನ ಬಿಕ್ಕಟ್ಟಿನ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಾಲ್ವಾನ್ ಘಟನೆಯ ನಂತರ ಈ ಪ್ರದೇಶದಲ್ಲಿ ಸೇನಾ ಪಡೆಗಳ ನಿಯೋಜನೆಗೆ ಸಂಬಂಧಿಸಿದಂತೆ ಯಥಾಸ್ಥಿತಿಯು ಕಳೆದ ಏಪ್ರಿಲ್‌ನಿಂದಲೂ ಅದೇ ಮಟ್ಟದಲ್ಲಿ ಮುಂದುವರಿದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.