ADVERTISEMENT

ವಾಯುಪಡೆ ವಿಮಾನ ಕಣ್ಮರೆ | ಶೋಧಕ್ಕೆ ಹಮಾಮಾನ ಅಡ್ಡಿ, ನಾಲ್ಕು ದಿನವಾದರು ಸುಳಿವಿಲ್ಲ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 1:47 IST
Last Updated 7 ಜೂನ್ 2019, 1:47 IST
   

ನವದೆಹಲಿ:ಭಾರತೀಯ ವಾಯುಪಡೆಯ ಎಎನ್‌–32 ವಿಮಾನ ನಾಪತ್ತೆಯಾಗಿ ನಾಲ್ಕು ದಿನ ಕಳೆದಿದ್ದು, ವಿಮಾನದ ಇರುವಿಕೆ ಬಗ್ಗೆ ಈ ವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

ನಾಪತ್ತೆಯಾಗಿರುವ ವಿಮಾನಕ್ಕಾಗಿ 100 ತಾಸುಗಳಿಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದೇವೆ.ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಪತ್ತೆಗಾಗಿ ಸಾಧ್ಯವಿರುವ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಯುದ್ಧ ವಿಮಾನ, ಸಿ130, ಹೆಲಿಕಾಪ್ಟರ್‌ಗಳು, ವಿಶೇಷ ಸೆನ್ಸಾರ್‌ಗಳು, ಉಪಗ್ರಹ ನೆರವು ಹಾಗೂ ನಾಗರಿಕ, ಪೊಲೀಸ್‌ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ನೆರವನ್ನು ಪಡೆದು ಹುಡುಕಾಟ ನಡೆಸಲಾಗುತ್ತಿದೆ. ಪ್ರತೀಕೂಲ ಹಮಾಮಾನದಿಂದ ಅಡ್ಡಿಯಾಗುತ್ತಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಕಾಣೆಯಾದ ವಿಮಾನದ ಪತ್ತೆ ಕಾರ್ಯದ ಯಾವ ಪ್ರಯತ್ನವನ್ನು ನಾವು ನಿಲ್ಲಿಸಿಲಲ್ಲ. ಶುಕ್ರವಾರ ಹವಾಮಾನ ಸ್ವಲ್ಪಮಟ್ಟಿಗೆ ಅನುಕೂಲಕರವಾಗಲಿದ್ದು, ಭಾರತೀಯ ನೌಕಾಪಡೆಯ ಪಿ8ಐ ವಿಮಾನ ಹುಡುಕಾಟ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ವಿಮಾನ ಸೋಮವಾರ ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾದತ್ತ ಹೊರಟಿದ್ದಾಗ ನಾಪತ್ತೆಯಾಗಿದೆ. ಅಂದು ಮಧ್ಯಾಹ್ನ 12.25ಕ್ಕೆ ಜೋರ್ಹಾಟ್‌ ವಾಯುನೆಲೆಯಿಂದ ಹೊರಟಿದ್ದ ವಿಮಾನ 1 ಗಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತ್ತು. ಭಾರತೀಯ ವಾಯಸೇನೆಯ 13 ಮಂದಿ ವಿಮಾನದಲ್ಲಿದ್ದರು.

ಹುಡುಕಾಟ ತೀವ್ರಗೊಳಿಸಲು ಒತ್ತಾಯ

ಕಣ್ಮರೆಯಾಗಿರುವ ವಿಮಾನ ಪತ್ತೆ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ವಿಮಾನದಲ್ಲಿದ್ದ ಇಬ್ಬರು ಭಾರತೀಯ ವಾಯು ಅಧಿಕಾರಿಗಳ ಕುಟುಂಬ ಸರ್ಕಾರವನ್ನು ಒತ್ತಾಯಿಸಿವೆ.

ವಿಮಾನ ಪತ್ತೆ ಹಚ್ಚಲು ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಕಾಣೆಯಾದ ಫ್ಲೈಟ್ ಲೆಫ್ಟಿನೆಂಟ್ ಆಶಿಶ್‌ ತನ್ವರ್‌ (29) ಅವರ ತಾಯಿ ಸರೋಜ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದ್ದಾರೆ.

ಕಾಣೆಯಾದ ಮತ್ತೊಬ್ಬ ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಮೋಹಿತ್‌ ಘರ್‌ (27) ಅವರ ಕುಟುಂಬವೂ ತ್ವರಿತ ಹುಡುಕಾಟಕ್ಕೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.