ರಾಜನಾಥ ಸಿಂಗ್
ನವದೆಹಲಿ: ದೇಶವು ಗಡಿಯಲ್ಲಿ ಅಸ್ಥಿರತೆಯೊಂದಿಗೆ ಹೋರಾಡುತ್ತಿರುವಾಗ, ಸಮಾಜದೊಳಗೆ ಹೊಸ ರೀತಿಯ ಅಪರಾಧಗಳು, ಭಯೋತ್ಪಾದನೆ ಮತ್ತು ಸೈದ್ಧಾಂತಿಕ ಯುದ್ಧಗಳು ಉಲ್ಬಣಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಮಂಗಳವಾರ ಎಚ್ಚರಿಸಿದರು.
ಆಧುನಿಕ ಆಂತರಿಕ ಅಪರಾಧಗಳು ಮತ್ತು ಬೆದರಿಕೆಗಳು ಹೆಚ್ಚು ಸಂಘಟಿತ, ಅದೃಶ್ಯವಾಗಿದ್ದು ಸಂಕೀರ್ಣ ಸ್ವರೂಪದವಾಗಿವೆ. ಅವು ಸಮಾಜದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿ, ನಂಬಿಕೆಯನ್ನು ದುರ್ಬಲಗೊಳಿಸುವ ಹಾಗೂ ರಾಷ್ಟ್ರದ ಸ್ಥಿರತೆಗೆ ಸವಾಲೊಡ್ಡುವ ಉದ್ದೇಶವನ್ನು ಹೊಂದಿವೆ ಎಂದು ಅವರು ದೂರಿದರು.
ಪೊಲೀಸ್ ಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಬಾಹ್ಯ ಮತ್ತು ಆಂತರಿಕ ಭದ್ರತೆಯನ್ನು ಸಮತೋಲನಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಹಿಂದೆ ‘ಕೆಂಪು ಕಾರಿಡಾರ್’ ಎಂದು ಕರೆಯಲಾಗುತ್ತಿದ್ದ ಪ್ರದೇಶಗಳು ಈಗ ಪ್ರಗತಿಯ ಕಾರಿಡಾರ್ಗಳಾಗಿ ಬದಲಾಗಿವೆ ಎಂದ ರಕ್ಷಣಾ ಸಚಿವರು, ಇದು ನಕ್ಸಲ್ ಸಮಸ್ಯೆ ವಿರುದ್ಧ ಸಾಧಿಸಿದ ಗಮನಾರ್ಹ ಪ್ರಗತಿ ಎಂದು ಹೇಳಿದರು.
ಈ ಸಮಸ್ಯೆಯು ಉಲ್ಬಣಗೊಳ್ಳದಂತೆ ತಡೆಯುವಲ್ಲಿ ಪೊಲೀಸ್, ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಸ್ಥಳೀಯ ಆಡಳಿತಗಳು ಸಂಘಟಿತ ಪ್ರಯತ್ನ ಮಾಡಿವೆ ಎಂದರು.
ನಕ್ಸಲ್ ಪಿಡುಗು ನಶಿಸುವ ಹಂತದಲ್ಲಿದೆ ಎಂದ ಅವರು, 2026ರ ಮಾರ್ಚ್ ವೇಳೆಗೆ ಈ ಪಿಡುಗು ಕೊನೆಗೊಳ್ಳಲಿದೆ ಎಂದು ಘೋಷಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬದ್ಧತೆಯನ್ನು ಪ್ರತಿಧ್ವನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.