ಮುಂಬೈ: ‘ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗಳಿಸಿಯೂ, ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಗಳಾದರೆ ಅದಕ್ಕೆ ಶಿವಸೇನಾ ಕಾರಣ‘ ಎಂದು ಸಾಮ್ನಾ ಪತ್ರಿಕೆ ಹೇಳಿದೆ.
‘ಬಿಹಾರ ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನಗಳನ್ನು ಗಳಿಸಿದರೂ, ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್ ಕುಮಾರ್ಗೆ ನೀಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಇದೇ ರೀತಿಯ ಭರವಸೆಯನ್ನು 2019ನೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾಗೆ ಬಿಜೆಪಿ ನೀಡಿತ್ತು. ಆದರೆ ಬಿಜೆಪಿ ಮಾತಿನಂತೆ ನಡೆದುಕೊಳ್ಳಲಿಲ್ಲ. ಇದು ಮಹಾರಾಷ್ಟ್ರದಲ್ಲಿ ರಾಜಕೀಯ ‘ಮಹಾಭಾರತ’ವನ್ನು ಸೃಷ್ಟಿಮಾಡಿತ್ತು’ ಎಂದು ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.
‘ಬಿಹಾರ ಚುನಾವಣೆಯಲ್ಲಿ ಜೆಡಿಯು 50 ಸ್ಥಾನಗಳನ್ನೂ ಗಳಿಸುವಲ್ಲಿ ವಿಫಲವಾಗಿದೆ. ಅದೇ ಬಿಜೆಪಿ 70 ಸ್ಥಾನಗಳನ್ನು ಗೆದ್ದಿದೆ. ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗೆದ್ದರೂ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಅಮಿತ್ ಶಾ ಅವರು ಭರವಸೆ ನೀಡಿದ್ದರು. ಒಂದು ವೇಳೆ ನಿತೀಶ್ ಮುಖ್ಯಮಂತ್ರಿ ಆದರೆ ಅದಕ್ಕೆ ಶಿವಸೇನಾ ಕಾರಣ’ ಎಂದು ಹೇಳಲಾಗಿದೆ.
‘ಬಿಹಾರದಲ್ಲಿ ತೇಜಸ್ವಿ ಯುಗ ಉದಯವಾಗಿದೆ. ತೇಜಸ್ವಿ ಯಾದವ್ ಏಕಾಂಗಿಯಾಗಿ ಅಧಿಕಾರದಲ್ಲಿದ್ದವರ ವಿರುದ್ಧ ಹೋರಾಡಿದ್ದಾರೆ. ಬಿಹಾರದಲ್ಲಿ ಮೋದಿಯ ವರ್ಚಸ್ಸು ಕೆಲಸ ಮಾಡಿದೆ ಎಂದು ಹೇಳುವುದು ತೇಜಸ್ವಿಗೆ ಅನ್ಯಾಯವಾದಂತೆ. ಆರಂಭದಲ್ಲಿ ಏಕಪಕ್ಷೀಯವಾಗಿದ್ದ ಚುನಾವಣೆಗೆ ತೇಜಸ್ವಿ ಅವರು ಭಾರೀ ಪೈಪೋಟಿ ನೀಡಿದ್ದಾರೆ. ಆದರೆ ಕಾಂಗ್ರೆಸ್ನ ಕಳಪೆ ಪ್ರದರ್ಶನದಿಂದ ತೇಜಸ್ವಿ ಅವರ ಅವಕಾಶ ಕೈ ತಪ್ಪಿತು’ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.