ಸುಧಾ ಮೂರ್ತಿ
ಪಿಟಿಐ
ಜೈಪುರ: ‘ದೇಶ ವಿಭಜನೆ ಬಗ್ಗೆ ನೋಡುವಾಗ, ಅದರ ಬಗ್ಗೆ ಮಕ್ಕಳಿಗೆ ಹೇಳಬೇಕೆಂದು ನನಗೆ ಯಾವಾಗಲೂ ಅನಿಸುತ್ತದೆ. ಏನು ನಡೆಯಿತು ಅದು ತಪ್ಪಾಗಿದೆ ಮತ್ತು ಅದು ಪುನರಾವರ್ತನೆಯಾಗಬಾರದು’ ಎಂದು ರಾಜ್ಯಸಭಾ ಸದಸ್ಯೆ, ಬರಹಗಾರ್ತಿ ಸುಧಾ ಮೂರ್ತಿ ಹೇಳಿದ್ದಾರೆ.
ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ತಮ್ಮ ಹೊಸ ಪುಸ್ತಕ ‘ದಿ ಮ್ಯಾಜಿಕ್ ಆಫ್ ದಿ ಲಾಸ್ಟ್ ಇಯರಿಂಗ್ಸ್’ನಲ್ಲಿ ದೇಶ ವಿಭಜನೆಯಂತಹ ಸೂಕ್ಷ್ಮ ವಿಷಯವನ್ನು ಪ್ರಜ್ಞಾಪೂರ್ವಕವಾಗಿ ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ. ಹಿಂದೆ ಆಗಿರುವ ತಪ್ಪು ಮರುಕಳಿಸದಂತೆ ಯುವ ಓದುಗರನ್ನು ಎಚ್ಚರಿಸುವ ಉದ್ದೇಶ ಹೊಂದಿರವುದಾಗಿಯೂ ಹೇಳಿದ್ದಾರೆ.
‘ಇತಿಹಾಸದ ಬಗ್ಗೆ ತಿಳಿಯದವರು, ಭವಿಷ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎಂದು ಕರೆಯಲ್ಪಡುವ ಸ್ಥಳದಿಂದ ವಲಸೆ ಬಂದ ಜನರ ಬಗ್ಗೆ ನನಗೆ ತುಂಬಾ ವಿಷಾದವಿದೆ’ ಎಂದು ಹೇಳಿದ್ದಾರೆ.
ಇಂದು ಜನರು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸ್ಥಿರತೆಯ ಹಿಂದೆ ಎಷ್ಟು ಶ್ರಮ ಮತ್ತು ತ್ಯಾಗ ಅಡಗಿದೆ ಎಂಬುದನ್ನು ತನ್ನ ಮೊಮ್ಮಕ್ಕಳಿಗೆ ಅರ್ಥಮಾಡಿಸುವ ಬಯಕೆಯಿದೆ ಎಂದು ಹೇಳಿದ್ದಾರೆ.
ಅಳಿಯನ ಕುಟುಂಬ ಪ್ರಸ್ತಾಪಿಸಿದ ಮೂರ್ತಿ:
ದೇಶ ವಿಭಜನೆಯ ಕರಾಳತೆ ಬಗ್ಗೆ ಮಾತನಾಡುವ ವೇಳೆ ತಮ್ಮ ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ಕುಟುಂಬದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಒಂದಲ್ಲ ಎರಡು ಬಾರಿ ಸುನಕ್ ಕುಟುಂಬವನ್ನು ಅವರ ನೆಲದಿಂದ ಕಿತ್ತೊಗೆಯಲಾಯಿತು’ ಎಂದು ಹೇಳಿದ್ದಾರೆ.
‘ಈಗಿನ ಪಾಕಿಸ್ತಾನದ ಒಂದು ಪ್ರದೇಶದಲ್ಲಿ ರಿಷಿ ಸುನಕ್ ಅಜ್ಜ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು. ದೇಶ ವಿಭಜನೆಯಿಂದ ಅವರು ತಮ್ಮ ನೆಲವನ್ನು ಬಿಡಬೇಕಾಯಿತು. ನಂತರ ಆಫ್ರಿಕಾದ ನೈರೋಬಿಯಲ್ಲಿ ನಲೆಸಿದ ಅವರನ್ನು ಅಲ್ಲಿಯೂ ಹೊರದಬ್ಬಿದರು. ರಿಷಿ ಅವರ ತಂದೆಗೆ 10 ವರ್ಷವಿದ್ದಾಗ ಅವರು ಲಂಡನ್ಗೆ ವಲಸೆ ಹೋದರು’ ಎಂದು ವಿವರಿಸಿದ್ದಾರೆ.
‘ಒಬ್ಬ ವ್ಯಕ್ತಿ ಪದೇ ಪದೇ ತಮ್ಮ ನೆಲವನ್ನು ಕಳೆದುಕೊಳ್ಳುವುದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.