ಅಹಮದಾಬಾದ್: ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ ವಿರುದ್ಧ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಭಾನುವಾರ ವಾಗ್ದಾಳಿ ನಡೆಸಿದ್ದು, ‘ನೀವು ಕಾಂಗ್ರೆಸ್ಗೆ ಮತ ನೀಡಿದಲ್ಲಿ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಅಭಿವೃದ್ಧಿಯಾಗುತ್ತದೆ, ಅಂತೆಯೇ ನೀವು ಬಿಜೆಪಿಗೆ ಮತ ಹಾಕಿದರೆ ಅಮಿತ್ ಶಾ ಮಗ ಅಭಿವೃದ್ಧಿ ಹೊಂದುತ್ತಾರೆ. ಆದರೆ, ನೀವು ಎಎಪಿಗೆ ಮತ ಹಾಕಿದರೆ ಗುಜರಾತ್ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ಭಾನುವಾರ ಯುವಜನರನ್ನು ಉದ್ದೇಶಿಸಿ ಮತನಾಡಿದ ಅವರು, ‘ನಾನು ಸದಸ್ಯನಾಗಿರುವ ಗುಜರಾತ್ನ ಕೆಲವು ವಾಟ್ಸ್ಆ್ಯಪ್ ಗುಂಪುಗಳಲ್ಲಿ ಇಂಥ ಸಂದೇಶಗಳನ್ನು ಓದಿದ್ದೇನೆ. ಆದರೆ, ಪಂಜಾಬ್ನಲ್ಲಿ ಎಎಪಿಯು ಹೊಸಯುಗದ ಹೊಸ ಪಕ್ಷವಾಗಿದೆ. ಹಾಗಾಗಿ, ಮತದಾರರು ನಮ್ಮ ಪಕ್ಷಕ್ಕೆ ಅವಕಾಶ ನೀಡಬೇಕು’ ಎಂದು ಕೋರಿದರು.
‘27 ವರ್ಷಗಳ ಆಡಳಿತದಲ್ಲಿ ಗುಜರಾತ್ನ ಮಕ್ಕಳಿಗೆ ಬಿಜೆಪಿಯು ಎಷ್ಟು ಉದ್ಯೋಗ ನೀಡಿದೆ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ನೀವು ಬಿಜೆಪಿಗೆ ಮತ ಹಾಕುತ್ತೀರಿ, ಇಲ್ಲದಿದ್ದರೆ ನಿಮ್ಮ ಮತಗಳು ಕಾಂಗ್ರೆಸ್ಗೆ ಹೋಗುತ್ತವೆ. ಕಾಂಗ್ರೆಸ್ ತುಂಬಾ ಕೆಟ್ಟದಾಗಿದೆ. ಆದ್ದರಿಂದ ಜನರು ಬಲವಂತದಿಂದ ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಾರಿ ಬಲವಂತದಿಂದ ಮತಹಾಕಬೇಕಿಲ್ಲ. ಈ ಬಾರಿ ಪ್ರಾಮಾಣಿಕ ಪಕ್ಷವಿದೆ ಹೊಸ ಪಕ್ಷ ಹೊಸ ಮುಖಗಳನ್ನು ಹೊಂದಿದೆ. ಈ ಬಾರಿ ನೀವು ಸರ್ಕಾರವನ್ನು ಬದಲಾಯಿಸಿದರೆ ನಿಮಗೆ ಉದ್ಯೋಗ ದೊರೆಯುತ್ತದೆ’ಎಂದು ಕೇಜ್ರಿವಾಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.