
ಛತ್ರಪತಿ ಸಂಭಾಜಿನಗರದಲ್ಲಿ ಜನವರಿ 28 ರಿಂದ ಫೆಬ್ರುವರಿ 4ರವರೆಗೆ ನಡೆಯಲಿರುವ ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜಅವರಿಗೆ ಪದ್ಮಪಾಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಜನವರಿ 28ರಂದು ನಡೆಯುವ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಾವಿದರು, ಗಣ್ಯ ವ್ಯಕ್ತಿಗಳು ಹಾಗೂ ಚಲನಚಿತ್ರ ಪ್ರೇಮಿಗಳು ಭಾಗಿಯಾಗಲಿದ್ದಾರೆ. ಎಂಟು ದಿನಗಳ ಚಿತ್ರೋತ್ಸವದಲ್ಲಿ ಸುಮಾರು 70 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಪ್ರಶಸ್ತಿ ಆಯ್ಕೆ ಮಂಡಳಿಯಲ್ಲಿ ಲತಿಕಾ ಪಡ್ಗಾಂಕರ್, ನಿರ್ಮಾಪಕರಾದ ಅಶುತೋಷ್ ಗೋವಾರಿಕರ್, ಸುನಿಲ್ ಸುಕ್ತಂಕರ್ ಮತ್ತು ಚಂದ್ರಕಾಂತ್ ಕುಲಕರ್ಣಿ ಇದ್ದರು. ಇವರ ಸಮ್ಮುಖದಲ್ಲಿ ಇಳಯರಾಜ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಳಯರಾಜ ಅವರಿಗೆ ಪದ್ಮಪಾಣಿ ಸ್ಮರಣಿಕೆಯ ಜೊತೆಗೆ, ಗೌರವ ಪ್ರಮಾಣ ಪತ್ರ ಹಾಗೂ ₹2 ಲಕ್ಷ ನಗದನ್ನು ಬಹುಮಾನವಾಗಿ ನೀಡಲಾಗುತ್ತದೆ. ಈ ಹಿಂದೆ ಜಾವೇದ್ ಅಖ್ತರ್, ಹಿರಿಯ ನಿರ್ದೇಶಕ ಹಾಗೂ ಲೇಖಕ ಸಾಯಿ ಪರಾಂಜಪೆ ಮತ್ತು ನಟ ಓಂ ಪುರಿ ಸೇರಿದಂತೆ ಹಲವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಇಳಯರಾಜ ಅವರ ಸಾಧನೆ
ಇಳಯರಾಜ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 7,000ಕ್ಕೂ ಹೆಚ್ಚು ಹಾಡುಗಳನ್ನು ಮತ್ತು 1,500ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಮೂಲ ಸಂಗೀತ ಸಂಯೋಜಿಸಿದ್ದಾರೆ. ಇವರು ಮುಖ್ಯವಾಗಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಮರಾಠಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತವನ್ನು ಸಂಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.