ಶ್ರೀನಗರ: ಶರಣಾಗಿದ್ದ ಉಗ್ರನೊಬ್ಬ ಕಾನ್ಸ್ಟೆಬಲ್ ಮೇಲೆ ಗುಂಡು ಹಾರಿಸಿ, ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುವ ವೇಳೆ ಮೃತಪಟ್ಟಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮ ಜಿಲ್ಲೆಯ ಟ್ರಾಲ್ ಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್ಎಜಿ) ಕ್ಯಾಂಪ್ನಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದೆ.ಮೊಹಮ್ಮದ್ ಅಮೀನ್ ಮಲಿಕ್ ಎಂಬಾತ ಮೃತಪಟ್ಟ ಉಗ್ರ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಸ್ಟೆಬಲ್ ಅಮ್ಜಿದ್ ಖಾನ್ ಅವರ ರೈಫಲ್ ಕಸಿದುಕೊಂಡ ಉಗ್ರ ಮಲಿಕ್, ಕಾನ್ಸ್ಟೆಬಲ್ ಮೇಲೆ ಗುಂಡು ಹಾರಿಸಿದ್ದನು. ನಂತರ ಶಿಬಿರದಲ್ಲಿ ಬಚ್ಚಿಟ್ಟುಕೊಂಡಿದ್ದನು. ಆತನ ಶರಣಾಗತಿಗೆ ನಡೆದ ಮನವೊಲಿಸುವ ಪ್ರಯತ್ನಗಳು ವಿಫಲಗೊಂಡವು.
ಬಳಿಕ ಏಕಾಏಕಿ ಮಲಿಕ್ ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದನು. ಈ ವೇಳೆ ನಡೆದ ಪ್ರತಿದಾಳಿಯಲ್ಲಿ ಆತ ಹತನಾದ. ಗಾಯಗೊಂಡಿರುವ ಕಾನ್ಸ್ಟೆಬಲ್ ಖಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.