ಪ್ರತಾಪ್ ಸಿಂಗ್ ಖಚರಿಯಾವಾಸ್
ಚಿತ್ರ: ಎಕ್ಸ್
ಜೈಪುರ: ಜಾರಿ ನಿರ್ದೇಶನಾಲಯದಿಂದ ದಾಳಿಗೆ ಒಳಗಾಗಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜಸ್ಥಾನ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್, ‘ನೀವು(ಬಿಜೆಪಿ) ಇದನ್ನು ಪ್ರಾರಂಭಿಸಿದ್ದೀರಿ.. ನಾವು ಮುಂದುವರಿಸುತ್ತೇವೆ..’ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಇಂದು(ಮಂಗಳವಾರ) ಪ್ರಕರಣವೊಂದರ ತನಿಖೆಯ ಭಾಗವಾಗಿ ಪ್ರತಾಪ್ ಸಿಂಗ್ ಅವರಿಗೆ ಸೇರಿದ ಮನೆ ಮತ್ತು ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ‘ಕಾಲ ಬದಲಾದ ಹಾಗೆ ಸರ್ಕಾರಗಳು ಬದಲಾಗುತ್ತವೆ. ರಾಹುಲ್ ಗಾಂಧಿ ಅವರು ಪ್ರಧಾನಿಯಾದ ಮೇಲೆ ಬಿಜೆಪಿಯವರ ಸ್ಥಿತಿ ಏನಾಗಬಹುದೆಂದು ಯೋಚಿಸಿ’ ಎಂದು ಹೇಳಿದ್ದಾರೆ.
‘ನೀವು(ಬಿಜೆಪಿ) ಇದನ್ನು ಪ್ರಾರಂಭಿಸಿದ್ದೀರಿ.. ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನೇ ಮುಂದುವರಿಸುತ್ತೇವೆ. ಅವರು ಎಷ್ಟು ಬೇಕಾದರೂ ಹುಡುಕಾಟ ನಡೆಸಬಹುದು. ತಪ್ಪು ಮಾಡಿಲ್ಲವಾದ್ದರಿಂದ ಹೆದರುವ ಅಗತ್ಯವೂ ಇಲ್ಲ. ಅಧಿಕಾರಿಗಳಿಗೆ ಸಹಕರಿಸುತ್ತೇನೆ’ ಎಂದಿದ್ದಾರೆ.
‘ತನಿಖಾ ಸಂಸ್ಥೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಜೆಪಿ ಬಿಡಬೇಕು’ ಎಂದು ಇದೇ ವೇಳೆ ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಇತರ ಕೆಲವು ಸ್ಥಳಗಳಲ್ಲಿಯೂ ಶೋಧ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.