ಸುಪ್ರೀಂ ಕೋರ್ಟ್–ಪಿಟಿಐ ಚಿತ್ರ
ನವದೆಹಲಿ: ‘ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಜ್ಯಪಾಲರು, ರಾಷ್ಟ್ರಪತಿಯವರು ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಹೇಳುವುದರಿಂದ ಸರ್ಕಾರದ ಒಂದು ಅಂಗವೇ ಹೆಚ್ಚಿನ ಅಧಿಕಾರ ಹೊಂದಿದಂತಾಗಲಿದೆ. ಇದರಿಂದ ‘ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ’ ಉಂಟಾಗಲಿದೆ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯ ದಾಖಲಿಸಿದೆ.
ಕಾಲಮಿತಿ ನಿಗದಿಪಡಿಸಿ ಏಪ್ರಿಲ್ 8ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ಗೆ ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಬಳಸಿಕೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಪ್ರಶ್ನೆಗಳನ್ನು ಕೇಳಿದ್ದರು. ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಲಿಖಿತ ಅಭಿಪ್ರಾಯದಲ್ಲಿ ಕೇಂದ್ರ ಸರ್ಕಾರವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಸಂವಿಧಾನದ ಯಾವುದೇ ಒಂದು ಅಂಗದ ಕಾರ್ಯವನ್ನು ಮತ್ತೊಂದು ಅಂಗವು ನಿರ್ವಹಿಸಲು ಸಾಧ್ಯವಿಲ್ಲ. ಯಾವುದೇ ಅಂಗವು ಅಹಂಕಾರದಿಂದ ವರ್ತಿಸಿ ಇನ್ನೊಂದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಮನವಿ ಮಾಡಿದರೆ ಅಥವಾ ಸಾಂಸ್ಥಿಕ ಅತೃಪ್ತಿ ವ್ಯಕ್ತಪಡಿಸಿದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ತಿಳಿಸಿದೆ.
ರಾಷ್ಟ್ರಪತಿಯವರು ಕೇಳಿದ 14 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಲಿಖಿತ ಅಭಿಪ್ರಾಯ ದಾಖಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು ಎರಡು ವಾರಗಳ ಹಿಂದೆ ಸೂಚನೆ ನೀಡಿತ್ತು. ಆಗಸ್ಟ್ 19ರಿಂದ ಸುಪ್ರೀಂಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.