ಪಟ್ನಾ: ಬಿಹಾರದ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ನಂತರ ನಿತೀಶ್ ಕುಮಾರ್ ಅವರು ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಅವರೇ ರಾಜ್ಯದ ಮುಖ್ಯಮಂತ್ರಿಯೂ ಆಗಲಿದ್ದು, ಇಂದು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೇಲೆ ಎಲ್ಲರ ಕಣ್ಣುಗಳೂ ನೆಟ್ಟಿವೆ.
ಕತಿಹಾರ್ ಶಾಸಕ ತಾರಕೇಶ್ವರ ಪ್ರಸಾದ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ರೇಣು ದೇವಿ ಅವರು ಉಪನಾಯಕಿ ಆಗಲಿದ್ದಾರೆ. ಈ ಕುರಿತ ನಿರ್ಧಾರ ಭಾನುವಾರ ಅಂತಿಮಗೊಂಡಿದೆ. ಈ ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈ ಇಬ್ಬರೂ ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದವರು. ಇವರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಆದರೆ, ನಿತೀಶ್ ಮಂತ್ರಿ ಮಂಡಲದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮಂತ್ರಿ ಸ್ಥಾನ ಸಿಗಲಿದೆ, ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬುದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೊತ್ತಾಗಲಿದೆ. ಹೀಗಾಗಿ ಸಮಾರಂಭದ ಸುತ್ತ ಕುತೂಹಲ ಮನೆ ಮಾಡಿದೆ. ಸುದ್ದಿ ಮಾಧ್ಯಮ 'ಹಿಂದೂಸ್ಥಾನ ಟೈಮ್ಸ್' ವರದಿ ಪ್ರಕಾರ 43 ಶಾಸಕರನ್ನು ಹೊಂದಿರುವ ಜೆಡಿಯು 12 ಮಂತ್ರಿಸ್ಥಾನಗಳನ್ನು ಪಡೆಯಲಿದ್ದು, 74 ಶಾಸಕರನ್ನು ಹೊಂದಿರುವ ಬಿಜೆಪಿ 18 ಸಚಿವ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ಮೈತ್ರಿಕೂಟದ ಪಕ್ಷಗಳಾದ ವಿಕಾಶಶೀಲ ಇನ್ಸಾನ್ ಪಕ್ಷ, ಹಿಂದೂಸ್ತಾನಿ ಅವಾಮ್ ಮೋರ್ಚ ಪಕ್ಷಗಳಿಗೆ ಒಂದೊಂದು ಸಚಿವ ಸ್ಥಾನ ಸಿಗಲಿದೆ,' ಎನ್ನಲಾಗಿದೆ.
ಪಕ್ಷಗಳು ಗಳಿಸಿರುವ ಪ್ರತಿ ಏಳು ಸ್ಥಾನಗಳಿಗೆ ಎರಡು ಸಚಿವ ಸ್ಥಾನ ಹಂಚಿಕೆ ಮಾಡಿ ಸೂತ್ರ ಹೆಣೆಯಲಾಗಿದೆ.
ಇನ್ನೊಂದೆಡೆ ಬಿಜೆಪಿ ಈ ಸರ್ಕಾರದಲ್ಲಿ ಇಬ್ಬರು ಡಿಸಿಎಂಗಳನ್ನು ಹೊಂದರಲಿದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.