ADVERTISEMENT

ತೆಲಂಗಾಣ| ಬುಡಕಟ್ಟು ಮಹಿಳೆಯ ಹೊಡೆದು ಕೊಂದು ಅತ್ಯಾಚಾರ

ಪಿಟಿಐ
Published 13 ಮೇ 2022, 8:43 IST
Last Updated 13 ಮೇ 2022, 8:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೈದರಾಬಾದ್‌: ಲೈಂಗಿಕ ದೌರ್ಜನ್ಯವನ್ನು ಪ್ರತಿರೋಧಿಸಿದ ಬುಡಕಟ್ಟು ಮಹಿಳೆಯನ್ನು ಕೊಂದು ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಸೋಮವಾರ ರಾತ್ರಿ ಹೈದರಾಬಾದ್ ಬಳಿಯ ಚೌಟುಪ್ಪಲ್‌ ಎಂಬಲ್ಲಿ ಈ ಕೃತ್ಯ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹೈದರಾಬಾದ್‌ನಿಂದ ಸುಮಾರು 40 ಕಿ.ಮೀ ದೂರದ ಯಾದಾದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್‌ನಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಆದಿವಾಸಿ ಮಹಿಳೆಯನ್ನು ಇ.ಹರೀಶ್ ಗೌಡ್‌ ಎಂಬಾತ ಕೊಂದು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಗೋದಾಮಿನಲ್ಲಿ ಸಂತ್ರಸ್ತೆಯನ್ನು ಒಬ್ಬಂಟಿಯಾಗಿ ಕಂಡ ಆರೋಪಿ ಆಕೆಯ ಮೇಲೆ ಎರಗಿದ್ದಾನೆ. ಆಕೆ ಪ್ರತಿರೋಧಿಸಿ, ಈ ವಿಷಯವನ್ನು ತನ್ನ ಪತಿಗೆ ತಿಳಿಸುವುದಾಗಿ ಹೇಳಿದ್ದಾರೆ. ಆಗ ಆರೋಪಿಯು ಮಹಿಳೆಯ ಮುಖಕ್ಕೆ ಮರದ ದೊಣ್ಣೆಯಿಂದ ಹೊಡೆದಿದ್ದಾನೆ. ಹೊಡತಕ್ಕೆ ಆಕೆ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ.

ಸಂತ್ರಸ್ತೆ ಹಲ್ಲೆಯಿಂದ ಮೃತಪಟ್ಟರೂ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸಂತ್ರಸ್ಥೆ ಧರಿಸಿದ್ದ ಬೆಳ್ಳಿ ವಸ್ತುಗಳನ್ನು ಆರೋಪಿ ದೋಚಿ ಪರಾರಿಯಾಗಿದ್ದಾನೆ.

ಸಂತ್ರಸ್ತೆಯ ಪತಿ ಗೋದಾಮಿಗೆ ಬಂದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಾಗರಕರ್ನೂಲ್ ಜಿಲ್ಲೆಗೆ ಸೇರಿದ ದಂಪತಿ ಜೀವನೋಪಾಯಕ್ಕಾಗಿ ಚೌಟುಪ್ಪಲ್‌ಗೆ ವಲಸೆ ಬಂದಿದ್ದರು. ಕಳೆದ ಎರಡು ತಿಂಗಳಿಂದ ಗೋದಾಮಿನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ ಎನ್.ಉದಯ್ ರೆಡ್ಡಿ ತಿಳಿಸಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯವನಾದ ಆರೋಪಿ, ಇಟ್ಟಿಗೆ ಗೂಡಿನ ಪಕ್ಕದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆಯ ಪತಿ ಸಮೀಪದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತೆ ಗೋದಾಮಿನಲ್ಲಿ ಒಬ್ಬರೇ ಇರುತ್ತಿದ್ದರು. ಇದರ ಲಾಭ ಪಡೆದ ಆರೋಪಿ ಕೃತ್ಯವೆಸಗಿದ್ದಾನೆ. ಈ ಬಗ್ಗೆ ಆರೋಪಿಯೂ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯ ವಿರುದ್ಧ ಅತ್ಯಾಚಾರ, ದರೋಡೆ ಮತ್ತು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.