ADVERTISEMENT

ಸ್ವಾತಂತ್ರ್ಯೋತ್ಸವ | ಭಯೋತ್ಪಾದನೆ, ವಿಸ್ತರಣಾ ವಾದವನ್ನು ಭಾರತ ಸೋಲಿಸುತ್ತಿದೆ: ಪ್ರಧಾನಿ ಮೋದಿ

ದೇಶದಾದ್ಯಂತ 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಾಗೂ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 4:00 IST
Last Updated 15 ಆಗಸ್ಟ್ 2020, 4:00 IST

ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಜೈಹಿಂದ್ ಘೋಷಣೆ ಮೊಳಗಿಸಿ ಭಾಷಣ ಮುಗಿಸಿದ ಪ್ರಧಾನಿ ಮೋದಿ

ಭಯೋತ್ಪಾದನೆ, ಭೂಪ್ರದೇಶ ವಿಸ್ತರಣಾ ವಾದವನ್ನು ಭಾರತ ಸೋಲಿಸುತ್ತಿದೆ. ಎಲ್‌ಒಸಿಯಿಂದ ಎಲ್‌ಎಸಿ ವರೆಗೆ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ಅವರದ್ದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ: ಪ್ರಧಾನಿ ಮೋದಿ

ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯಗಳಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ: ಮೋದಿ

ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಯುಗ ಶುರುವಾಗಿದೆ: ಮೋದಿ

ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ: ಪ್ರಧಾನಿ ಮೋದಿ

ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿಯ ಪುನರ್ ಪರಿಶೀಲನೆಗೆ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ: ಪ್ರಧಾನಿ ಮೋದಿ

ಮಹಿಳೆಯರು ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ಗಟ್ಟಿಗೊಳಿಸಿದ್ದಾರೆ. ಹೆಮ್ಮೆಗೊಳ್ಳುವಂತೆ ಮಾಡಿದ್ದಾರೆ: ಮೋದಿ

‘ಆತ್ಮ ನಿರ್ಭರ ಭಾರತ’ ಸಾಧಿಸಲು ಶಿಕ್ಷಣ ಬಹು ಮುಖ್ಯವಾದದ್ದು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ: ಪ್ರಧಾನಿ ಮೋದಿ

2014ಕ್ಕೂ ಮೊದಲು ಕೇವಲ 5 ಡಜನ್ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸಲಾಗಿದೆ. ಮುಂದಿನ ಸಾವಿರ ದಿನಗಳಲ್ಲಿ ಎಲ್ಲ ಹಳ್ಳಿಗಳಿಗೆ ದೊರೆಯಲಿದೆ: ಮೋದಿ

‘ಆತ್ಮ ನಿರ್ಭರ ಭಾರತ’ ಸಾಧಿಸಲು ಕೃಷಿ ಕ್ಷೇತ್ರ, ಕೃಷಿಕರು ‘ಆತ್ಮ ನಿರ್ಭರ’ರಾಗಬೇಕಿದೆ. ಕೃಷಿಕರಿಗೆ ಹೆಚ್ಚು ಮೂಲಸೌಕರ್ಯ ಕಲ್ಪಿಸಲು ₹1 ಲಕ್ಷ ಕೋಟಿ ‘ಕೃಷಿ ಮೂಲಸೌಕರ್ಯ ನಿಧಿ’ ಸ್ಥಾಪಿಸಲಾಗಿದೆ: ಮೋದಿ

ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ 18ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ: ಪ್ರಧಾನಿ ಮೋದಿ

ಸ್ವತಂತ್ರ ಭಾರತದ ಮನಸ್ಥಿತಿ ‘ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು)’ ಆಗಿರಬೇಕು. ಸ್ಥಳೀಯ ಉತ್ಪನ್ನಗಳನ್ನು ನಾವು ಇಷ್ಟಪಡಬೇಕು. ನಾವಿದನ್ನು ಮಾಡದಿದ್ದರೆ ಸ್ಥಳೀಯವಾಗಿ ಉತ್ತಮ ಉತ್ಪನ್ನಗಳ ತಯಾರಿಗೆ ಅವಕಾಶ ದೊರೆಯುವುದಿಲ್ಲ, ಪ್ರೋತ್ಸಾಹ ದೊರೆಯುವುದಿಲ್ಲ: ಮೋದಿ

‘ಆತ್ಮ ನಿರ್ಭರ ಭಾರತ’ ಸಾಧಿಸಲ್ಲಿ ಲಕ್ಷಾಂತರ ಸವಾಲುಗಳಿವೆ ಎಂಬುದನ್ನು ಬಲ್ಲೆ. ಆದರೆ, ಈ ಸವಾಲುಗಳಿಗೆ ದೇಶದಲ್ಲಿ ಕೋಟ್ಯಂತರ ಪರಿಹಾರಗಳೂ ಇವೆ. ನನ್ನ ದೇಶವಾಸಿಗಳು ಸವಾಲು ಮೆಟ್ಟಿ ನಿಲ್ಲುವ ಪರಿಹಾರ ನೀಡುತ್ತಾರೆ: ಮೋದಿ

ಸ್ವಾತಂತ್ರ್ಯ ಹೋರಾಟಗಾರರು, ಯೋಧರ ತ್ಯಾಗ, ಬಲಿದಾನ ಸ್ಮರಿಸಿದ ಪ್ರಧಾನಿ ಮೋದಿ

ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ: ಪ್ರಧಾನಿ ಮೋದಿ

‘ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ: ಮೋದಿ

ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ: ಮೋದಿ

ದೇಶದ 130 ಕೋಟಿ ಜನರ ಮಂತ್ರವಾಗಿದೆ ‘ಆತ್ಮ ನಿರ್ಭರ ಭಾರತ’: ಪ್ರಧಾನಿ ಮೋದಿ

ದೇಶದ ಮಹಿಳೆಯರು, ಮಕ್ಕಳ ಮೇಲೆ ನನಗೆ ಪೂರ್ಣ ನಂಬಿಕೆಯಿದೆ. ನಾವು ‘ಆತ್ಮ ನಿರ್ಭರ ಭಾರತ’ ಸಾಧಿಸಬಲ್ಲೆವು

ಭಾರತ ಯುವ ಶಕ್ತಿಯಿಂದ ತುಂಬಿದ ದೇಶ, ‘ಆತ್ಮ ನಿರ್ಭರ’ಕ್ಕೆ ಆತ್ಮವಿಶ್ವಾಸ ಹೊಂದಿರುವ ದೇಶ ಭಾರತ: ಮೋದಿ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸುವ ದಿನ ಇದು. ನಮ್ಮ ಭದ್ರತೆಯನ್ನು ಖಾತರಿಪಡಿಸುವ ಸೇನೆ, ಅರೆಸೈನಿಕ ಮತ್ತು ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು: ಪ್ರಧಾನಿ ಮೋದಿ

ಈ ಕೋವಿಡ್ ಕಾಲದಲ್ಲಿ, ಕೊರೊನಾ ಯೋಧರು ‘ಸೇವಾ ಪಾರ್ಮೋ ಧರ್ಮಃ’ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಭಾರತದ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು: ಮೋದಿ

ನಾವು ಸಂಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ನಾನು ಇಂದು (ಕೆಂಪು ಕೋಟೆಯಲ್ಲಿ) ಚಿಕ್ಕ ಮಕ್ಕಳನ್ನು ನನ್ನ ಮುಂದೆ ನೋಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ಎಲ್ಲರಿಗೂ ತಡೆಯೊಡ್ಡಿದೆ: ಮೋದಿ

ದೇಶದ ಉಜ್ವಲ ಭವಿಷ್ಯಕ್ಕೆ ಕೊರೊನಾ ಅಡ್ಡಿಯಾಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಕೊರೊನಾ ಯೋಧರ ಕಾರ್ಯ ಶ್ಲಾಘನೀಯ: ಮೋದಿ

ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ಕೆಂಪುಕೋಟೆಯಲ್ಲಿ ಗೌರವ ವಂದನೆ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ತಲುಪಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿಯವರನ್ನು ಸ್ವಾಗತಿಸಿದರು

ಪ್ರಧಾನಿ ನರೇಂದ್ರ ಮೋದಿಯವರು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು

ಎಲ್ಲ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು: ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ದೆಹಲಿಯ ಕೆಂಪುಕೋಟೆಯ ಇತ್ತೀಚಿನ ಚಿತ್ರಗಳು

ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಈಗ ಇಳಿವಯಸ್ಸಿನಲ್ಲಿದ್ದಾರೆ. ಆದರೆ, ಆ ಹೋರಾಟದ ಕಿಚ್ಚು ಇನ್ನೂ ಜೀವಂತವಾಗಿದೆ ಎಂಬ ಕಾರಣದಿಂದಲೇ ಇರಬಹುದು ಅವರೆಲ್ಲರೂ ಚೈತನ್ಯಯುತವಾಗಿಯೇ ಇದ್ದಾರೆ. ಸ್ವಾತಂತ್ರ್ಯ ಸಮರದ ಬಗ್ಗೆ, ಹೋರಾಟಕ್ಕೆ ನೇತೃತ್ವ ಕೊಟ್ಟಿದ್ದ ಗಾಂಧೀಜಿಯ ಬಗ್ಗೆ ಮಾತನಾಡುವಾಗ ಅವರ ಹುರುಪು ನೂರ್ಮಡಿಸುತ್ತದೆ.

ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ 7ನೇ ಬಾರಿ ಸ್ವಾತಂತ್ರ್ಯೋತ್ಸವ ದಿನದ ಭಾಷಣ ಮಾಡಲಿದ್ದಾರೆ.  ವಿವರ ಓದಿ: ಸ್ವಾತಂತ್ರ್ಯೋತ್ಸವ: 7ನೇ ಬಾರಿಗೆ ಭಾಷಣ ಮಾಡಲಿರುವ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT