ನವದೆಹಲಿ: ಕೋವಿಡ್-19 ಲಸಿಕೆಯ ಉಚಿತ ಮತ್ತು ಸಾರ್ವತ್ರಿಕ ಲಭ್ಯತೆಯ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭಾರತಕ್ಕೆ ಲಕ್ಷಾಂತರ ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ಮಾನವ ಹಕ್ಕುಗಳ ದಿನದ ಅಂಗವಾಗಿರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,‘ ಮಾನವ ಸಂಕುಲಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಸಾಂಕ್ರಾಮಿಕ ಇನ್ನೂ ಅಂತ್ಯವಾಗಿಲ್ಲ, ವೈರಾಣು ನಮ್ಮಗಿಂತ ಒಂದು ಹೆಜ್ಜೆ ಮುಂದಿದೆ. ಜಾಗತಿಕ ಸಹಭಾಗಿತ್ವ ಮತ್ತು ವಿಜ್ಞಾನಿಗಳ ನೆರವಿನೊಂದಿಗೆ ನಾವು ಸಾಂಕ್ರಾಮಿಕವನ್ನು ಎದುರಿಸುತ್ತಾ ಬಂದಿದ್ದೇವೆ’ ಎಂದರು.
‘ಸಾಂಕ್ರಾಮಿಕ ರೋಗವು ಸಮಾಜದ ಎಲ್ಲಾ ವರ್ಗಗಳ ಜನರ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇದು ಸಮಾಜದ ದುರ್ಬಲ ವರ್ಗಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ. ಭಾರತದ ಮುಂದೆ ಹಲವಾರು ಸವಾಲುಗಳಿದ್ದರೂ,ಲಸಿಕೆಯ ಉಚಿತ ಮತ್ತು ಸಾರ್ವತ್ರಿಕ ಲಭ್ಯತೆಯ ನೀತಿಯ ಮೂಲಕ ಭಾರತ ಲಕ್ಷಾಂತರ ಜೀವಗಳನ್ನು ಉಳಿಸಿದೆ. ಅತಿ ದೊಡ್ಡ ಲಸಿಕಾ ಅಭಿಯಾನದ ಮೂಲಕ ಸರ್ಕಾರವು ಕೋಟಿಗಟ್ಟಲೆ ಜನರಿಗೆ ಸೋಂಕಿನಿಂದ ರಕ್ಷಣೆ ನೀಡಿದೆ’ ಎಂದು ಅವರು ಹೇಳಿದರು.
‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವುಸಾಂಕ್ರಾಮಿಕದಿಂದ ತೊಂದರೆಗೊಳಾಗಾದ ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ಹಲವಾರು ಸಲಹೆ ನೀಡಿದೆ. ಇದು ನಮಗೆ ಬಹಳಷ್ಟು ನೆರವಾಗಿದೆ. ಸಮಾನತೆಯು ಮಾನವ ಹಕ್ಕಿನ ಆತ್ಮವಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.