ನವದೆಹಲಿ: ಭಾರತ ಸರ್ಕಾರ ಹಣಕಾಸು ನೆರವು ನೀಡಿರುವ ನೇಪಾಳದ ಯೋಜನೆಗಳ ಪರಿಶೀಲನೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಗಡಿ ಪ್ರದೇಶದ ಬಿಕ್ಕಟ್ಟಿನ ಕುರಿತು ಮೊದಲ ಬಾರಿಗೆ ಉಭಯ ರಾಷ್ಟ್ರಗಳು ಮಾತುಕತೆ ನಡೆಸಲಿವೆ.
ಕಾಠ್ಮಂಡುವಿನಲ್ಲಿ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಭಾರತದ ನೇತೃತ್ವ ವಹಿಸಲಿದ್ದಾರೆ ಹಾಗೂ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಅಲ್ಲಿನ ಅಧಿಕಾರಿ ತಂಡದ ನೇತೃತ್ವ ವಹಿಸಲಿದ್ದಾರೆ.
ಕೋವಿಡ್–19 ಕಾರಣದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಆಗಸ್ಟ್ 18ರಂದು ಸಭೆ ನಡೆಯುವ ಸಾಧ್ಯತೆ ಇರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೇಪಾಳದಲ್ಲಿ ಭೂಕಂಪನದಿಂದ ತೀವ್ರ ಹಾನಿ ಉಂಟಾದ ಬಳಿಕ ಹಲವು ಪುನಶ್ಚೇತನ ಕಾರ್ಯಗಳಲ್ಲಿ ಭಾರತ ಕೈಜೋಡಿಸಿದೆ. ತರಾಯಿ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿರ್ಮಿಸುತ್ತಿದೆ ಹಾಗೂ ರೈಲ್ವೆ ಮಾರ್ಗ, ಪೊಲೀಸ್ ತರಬೇತಿ ಅಕಾಡೆಮಿ, ಪಾಲಿಟೆಕ್ನಿಕ್ ಕಾಲೇಜು, ತೈಲ ಕೊಳವೆ ಮಾರ್ಗ ಹಾಗೂ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರ ₹800 ಕೋಟಿ ಮೀಸಲಿರಿಸಿದೆ.
2016ರಿಂದ ಆರಂಭಿಸಲಾಗಿರುವ ಯೋಜನೆಗಳ ಪರಿಶೀಲನಾ ಸಭೆ ಕೊನೆಯದಾಗಿ 2019ರ ಜುಲೈನಲ್ಲಿ ನಡೆಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣಗಳಿಂದಾಗಿ ಭಾರತ ಮತ್ತು ನೇಪಾಳದ ಅಧಿಕಾರಿಗಳು ಕಾಲಾಪಾನಿ ಗಡಿ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಸಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.