ADVERTISEMENT

2040ಕ್ಕೆ ಚಂದ್ರನಲ್ಲಿಗೆ ಗಗನಯಾನಿ ಕಳುಹಿಸಲು ಭಾರತ ಯೋಜನೆ: ಇಸ್ರೊ ಮಾಜಿ ಅಧ್ಯಕ್ಷ

ಪಿಟಿಐ
Published 7 ಜನವರಿ 2026, 13:20 IST
Last Updated 7 ಜನವರಿ 2026, 13:20 IST
   

ಅಹಮದಾಬಾದ್: 2040ಕ್ಕೆ ಚಂದ್ರನ ಅಂಗಳಕ್ಕೆ ಗಗನಯಾನಿಯನ್ನು ಕಳುಹಿಸಲು ಭಾರತ ಯೋಜಿಸಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

ಪ್ರಸ್ತುತ ಭೌತಿಕ ಸಂಶೋಧನಾ ಪ್ರಯೋಗಾಲಯದ(ಪಿಆರ್‌ಎಲ್) ನಿರ್ವಹಣಾ ಮಂಡಳಿಯ ಅಧ್ಯಕ್ಷರಾಗಿರುವ ಕುಮಾರ್, ಭಾರತೀಯ ಖಗೋಳ ವಿಜ್ಞಾನ ಸಂಘದ(ಎಎಸ್‌ಐ) 5ನೇ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಈಗ ಮತ್ತು 2040ರ ನಡುವೆ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಾಚರಣೆಗಳು ನಡೆಯಲಿವೆ. ಆದ್ದರಿಂದ, 2040 ಎಂಬುದು ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಯೋಜನೆಯಾಗಿದೆ. ಭಾರತವು 2040ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕಾರ್ಯಕ್ರಮದ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಬಾಹ್ಯಾಕಾಶ ಸಂಶೋಧನೆಯ ಕುರಿತಾದ ಯೋಜನೆ ಬಗ್ಗೆ ಬೆಳಕು ಚೆಲ್ಲಿದರು.

‘ಚಂದ್ರನ ದಕ್ಷಿಣ ಧ್ರುವದಲ್ಲಿ ನಾವು ಕೆಲ ನಿರ್ದಿಷ್ಟ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಆ ಪ್ರಯತ್ನದ ಆರಂಭಿಕ ಹಂತ ಮಾತ್ರ ಇದು. ಭಾರತವು ಬಾಹ್ಯಾಕಾಶ ಯಾನದ ಮೂಲಕ ಖಗೋಳ ಜಗತ್ತನ್ನು ಅನ್ವೇಷಿಸುವ ಬದ್ಧತೆ ಹೊಂದಿದೆ’ಎಂದು ಹೇಳಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಸಭೆಯ ಮೊದಲು ಮಾಡಿದ ಭಾಷಣದಲ್ಲಿ ಕುಮಾರ್, ಮಿಲಿಟರಿ ಉದ್ದೇಶಗಳಿಗಾಗಿ ಅಲ್ಲದೆ, ಸಾಮಾಜಿಕ ಪ್ರಯೋಜನಗಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ನಿರ್ಮಿಸಲು ಪ್ರಾರಂಭಿಸಿದ ಏಕೈಕ ದೇಶ ಭಾರತ ಎಂದು ತಿಳಿಸಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದು ಕೇವಲ 10 ವರ್ಷ ಆಗಿದ್ದಾಗ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಡಾ. ವಿಕ್ರಮ್ ಸಾರಾಭಾಯ್ ಅವರ ಕೊಡುಗೆ ಅದ್ಭುತವಾಗಿತ್ತು ಎಂದು ಅವರು ಹೇಳಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನವನ್ನು ನಾಗರಿಕರಿಗೆ ನೆರವಾಗುವಂತೆ ಪ್ರಸಾರ ಸಂವಹನ ಮತ್ತು ಹವಾಮಾನ ಮೇಲ್ವಿಚಾರಣೆ ಸುಧಾರಿಸಲು ಹೇಗೆ ಬಳಸಬಹುದು ಎಂಬುದನ್ನು ಸಾರಾಭಾಯ್ ಅನ್ವೇಷಿಸಿದರು ಎಂದು ಅವರು ತಿಳಿಸಿದ್ದಾರೆ.

ಮೂರು ದಿನಗಳ ವಿಚಾರ ಸಂಕಿರಣವು ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಗ್ರಹ ವಿಜ್ಞಾನ, ವಾತಾವರಣ ವಿಜ್ಞಾನ, ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇದರಲ್ಲಿ ದೇಶದಾದ್ಯಂತದ ಸುಮಾರು 150 ವಿಜ್ಞಾನಿಗಳು, ಎಂಜಿನಿಯರ್‌ಗಳು, ಶಿಕ್ಷಣ ತಜ್ಞರು, ಯುವ ಸಂಶೋಧಕರು ಮತ್ತು ುದಯೋನ್ಮುಖ ವಿಜ್ಞಾನಿಗಳು ಭಾಗವಹಿಸಿದ್ದಾರೆ.