ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: 2020ರ ಭಾರತ–ಚೀನಾ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ ಎಂದು ವಿಪಕ್ಷ ನಾಯಕ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಮಾತನಾಡಿದ ರಾಹುಲ್, ಮಾಜಿ ಸೇನಾ ಮುಖ್ಯಸ್ಥ ನರವಣೆಯವರ ಅಪ್ರಕಟಿತ ಆತ್ಮಚರಿತ್ರೆ ಪುಸ್ತಕದ ಬಗ್ಗೆ ಸರ್ಕಾರ ಏನೇ ಹೇಳಲಿ, ದೇಶದ ಯುವಕರು ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಹೇಳಿದ್ದಾರೆ.
ಲೋಕಸಭಾ ಸ್ವೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನರವಣೆಯವರ ಆತ್ಮಚರಿತ್ರೆ ಪುಸ್ತಕ ಪ್ರಕಟಗೊಂಡಿಲ್ಲ, ಅಸ್ತಿತ್ವದಲ್ಲಿಲ್ಲ ಎಂದು ಹೇಳುತ್ತಿದ್ದಾರೆ. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ದೂರಿದ್ದಾರೆ.
'ಭಾರತ–ಚೀನಾ ಬಿಕ್ಕಟ್ಟಿನ ಸಮಯದಲ್ಲಿ ಲಡಾಖ್ನಲ್ಲಿ ಏನು ಆಯಿತು ಎಂದು ನರವಣೆಯವರ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ಕಟ್ಟಿನ ಸಮಯದಲ್ಲಿ ಯಾವುದೇ ಜವಾಬ್ದಾರಿಯುತ ಹೇಳಿಕೆ ಅಥವಾ ನಿರ್ದೇಶನ ನೀಡಲಿಲ್ಲ. ಎಲ್ಲ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿದ್ದರು. ನಾನು ಒಬ್ಬಂಟಿಯಾಗಿದ್ದೇನೆ ಎನಿಸಿತು ಎಂದು ಹೇಳಿಕೊಂಡಿರುವ ವಿಷಯ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ' ಎಂದು ರಾಹುಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಇಂದು ಲೋಕಸಭೆಗೆ ಬರುವ ಧೈರ್ಯವಿಲ್ಲ ಎನಿಸುತ್ತದೆ. ಒಂದು ವೇಳೆ ಅವರು ಬಂದರೆ ನಾನು ಅವರಿಗೆ ಈ ಪುಸ್ತಕವನ್ನು ನೀಡುತ್ತೇನೆ ಎಂದು ರಾಹುಲ್ ತಿಳಿಸಿದ್ದಾರೆ.
‘ರಾಷ್ಟ್ರೀಯ ಭದ್ರತೆ’ಯ ವಿಷಯ ಎಂದು ನರವಣೆಯವರ ಅಪ್ರಕಟಿತ ಪುಸ್ತಕದ ಬಗ್ಗೆ ‘ದಿ ಕ್ಯಾರವಾನ್’ನಲ್ಲಿ ಬಂದ ಲೇಖನವನ್ನು ಲೋಕಸಭೆಯಲ್ಲಿ ರಾಹುಲ್ ಉಲ್ಲೇಖಿಸಿದ್ದರು. ಇದಕ್ಕೆ ಆಡಳಿತ ಪಕ್ಷದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.