ADVERTISEMENT

ಕೊರೊನಾ: ಭಾರತದಲ್ಲಿ ಗುಣಮುಖ ಪ್ರಮಾಣ ಶೇ 65.44

ಪಿಟಿಐ
Published 2 ಆಗಸ್ಟ್ 2020, 20:16 IST
Last Updated 2 ಆಗಸ್ಟ್ 2020, 20:16 IST
ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖರಾಗಿರುವುದು–ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖರಾಗಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ:ದೇಶದಾದ್ಯಂತ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆಯು ಭಾನುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ 11 ಲಕ್ಷ ದಾಟಿದೆ. ಬೆಳಗ್ಗೆ 8 ಗಂಟೆ ವರೆಗಿನ 24 ತಾಸುಗಳಲ್ಲಿ 51 ಸಾವಿರ ರೋಗಿಗಳು ಗುಣಮುಖರಾಗಿದ್ದಾರೆ. ಇದು ಈವರೆಗಿನ ದಾಖಲೆ. ಗುಣಮುಖ ಪ್ರಮಾಣವು ಶೇ 65.44ಕ್ಕೆ ಏರಿದೆ. ಗುಣಮುಖರಾದವರ ಒಟ್ಟು ಸಂಖ್ಯೆಯು 11.45 ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಹೊಸ ಮಾರ್ಗಸೂಚಿ:ವಿದೇಶದಿಂದ ಬರುವವರಿಗೆ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕಟಿಸಿದೆ. ಇದು ಇದೇ 8ರಿಂದ ಅನ್ವಯ ಆಗಲಿದೆ.

14 ದಿನಗಳ ಕಡ್ಡಾಯ ಪ್ರತ್ಯೇಕ ವಾಸಕ್ಕೆ ಸಿದ್ಧ ಎಂಬ ಮುಚ್ಚಳಿಕೆಯನ್ನು ಎಲ್ಲ ಪ್ರಯಾಣಿಕರುwww.newdelhiairport.in ವೆಬ್‌ಸೈಟ್‌ಗೆ ಸಲ್ಲಿಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ADVERTISEMENT

ಗರ್ಭಿಣಿಯರು, ಕುಟುಂಬದಲ್ಲಿ ಸಾವಿನ ಕಾರಣಕ್ಕೆ ದೇಶಕ್ಕೆ ಬಂದವರು, ಗಂಭೀರ ಕಾಯಿಲೆ ಇರುವವರು, 10 ವರ್ಷಕ್ಕಿಂತ ಒಳಗಿನ ಮಕ್ಕಳ ಪೋಷಕರು 14 ದಿನಗಳ ಮನೆ ಪ್ರತ್ಯೇಕವಾಸಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಅಂತಹ ಅವಕಾಶ ಬೇಕಿದ್ದರೆ ಪ್ರಯಾಣಕ್ಕೆ 72 ತಾಸು ಮುಂಚಿತವಾಗಿ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು.

ಸಾಂಸ್ಥಿಕ ಪ್ರತ್ಯೇಕವಾಸದಿಂದ ವಿನಾಯಿತಿ ಬಯಸುವವರು ಕೋವಿಡ್‌ ಇಲ್ಲ ಎಂಬುದು ದೃಢಪಟ್ಟ ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕು.ಪ್ರಯಾಣಕ್ಕೆ 96 ತಾಸು ಮುಂಚಿತವಾಗಿ ಈ ಪರೀಕ್ಷೆ ನಡೆಸಿರಬೇಕು. ಪರೀಕ್ಷೆಯ ವರದಿಯನ್ನು ಪೋರ್ಟಲ್‌ಗೆ ಸಲ್ಲಿಸಬೇಕು. ಭಾರತಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ಅಥವಾ ಬಂದರಿನಲ್ಲಿ ವರದಿಯನ್ನು ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಅಮಿತ್‌ ಶಾಗೆ ಕೋವಿಡ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಆರೋಗ್ಯ ಉತ್ತಮವಾಗಿದೆ. ಆದರೆ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಶಾ ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.