ಕಠ್ಮಂಡು: ಗೌತಮ ಬುದ್ಧ ಹುಟ್ಟಿದ್ದು ನೇಪಾಳದಲ್ಲಿಯೇ. ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭಾರತ ಹೇಳಿದೆ.
ಶನಿವಾರ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಆಯೋಜಿಸಿದ ವೆಬಿನಾರ್ನಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಇಬ್ಬರು 'ಶ್ರೇಷ್ಠ ಭಾರತೀಯರು'. ಅವರನ್ನು ವಿಶ್ವದಾದ್ಯಂತ ಜನರು ನೆನಪಿಸಿಕೊಳ್ಳುತ್ತಾರೆ ಎಂದಿದ್ದರು.
ಆದಾಗ್ಯೂ, ಜೈಶಂಕರ್ ಅವರ'ಬುದ್ಧ ಭಾರತೀಯ' ಎಂಬ ಹೇಳಿಕೆಗೆಆಕ್ಷೇಪ ವ್ಯಕ್ತಪಡಿಸಿದ ನೇಪಾಳದ ವಿದೇಶಾಂಗ ಸಚಿವಾಲಯ ನೇಪಾಳದ ಲುಂಬಿನಿಯಲ್ಲಿ ಬುದ್ಧ ಜನಿಸಿದನೆಂಬುದು ಐತಿಹಾಸಿಕ ಪುರಾವೆಗಳಿಂದ ಸಾಬೀತಾಗಿರುವ ಮತ್ತು ನಿರಾಕರಿಸಲಾಗದ ಸಂಗತಿಯಾಗಿದೆ ಎಂದಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ಭೇಟಿ ನೀಡಿ ಇಲ್ಲಿನ ಸಂಸತ್ನಲ್ಲಿ ಮಾತನಾಡಿದಾಗ ವಿಶ್ವದ ಶಾಂತಿಯ ಪ್ರಚಾರಕ ಬುದ್ಧ ಹುಟ್ಟಿದ ನಾಡು ಇದು ಎಂದು ಹೇಳಿದ್ದರು ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.
ನೇಪಾಳದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ಜೈಶಂಕರ್ ಅವರು ವೆಬಿನಾರ್ನಲ್ಲಿ 'ನಮ್ಮ ಬೌದ್ಧಿಕ ಪರಂಪರೆ' ಎಂದು ಉಲ್ಲೇಖಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗೌತಮ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದ್ದು ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.