ADVERTISEMENT

ಹೊಸದಾಗಿ ರೂಪುಗೊಂಡ ಹಿಮಾಲಯದ ಸರೋವರದಿಂದ ಮತ್ತೊಂದು ಪ್ರವಾಹದ ಭೀತಿ!

ಏಜೆನ್ಸೀಸ್
Published 12 ಫೆಬ್ರುವರಿ 2021, 14:50 IST
Last Updated 12 ಫೆಬ್ರುವರಿ 2021, 14:50 IST
ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತ ದುರಂತ
ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತ ದುರಂತ   

ನವದೆಹಲಿ: ಹೊಸದಾಗಿ ರೂಪುಗೊಂಡಿರುವ ಹಿಮಾಲಯದ ಸರೋವರವು ಉತ್ತರ ಭಾರತದ ಪ್ರಕೃತಿ ವಿಕೋಪ ಪೀಡಿತ ಕಣಿವೆಯ ಮೇಲೆ ಮಗದೊಂದು ಪ್ರವಾಹದ ಭೀತಿಯನ್ನು ಹುಟ್ಟು ಹಾಕಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಹೆಲೆಕಾಪ್ಟರ್ ಸಮೀಕ್ಷೆ ಹಾಗೂ 16 ತಾಸುಗಳಷ್ಟು ಕಣಿವೆಯನ್ನು ಏರಿ ತನಿಖೆ ನಡೆಸಲು ತಂಡವನ್ನು ರೂಪಿಸಿದೆ.

ಕಳೆದ ಭಾನುವಾರ (ಫೆ.7) ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆದ ನೀರ್ಗಲ್ಲು ಕುಸಿತದ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿ ಹಲವರು ಮೃತಪಟ್ಟಿದ್ದರು. ಘಟನೆಯಲ್ಲಿ ಇದುವರೆಗೆ 37 ಮಂದಿ ಮೃತಪಟ್ಟಿದ್ದು, 168 ಮಂದಿ ನಾಪತ್ತೆಯಾಗಿದ್ದಾರೆ.

ADVERTISEMENT

ಪ್ರವಾಹದ ರಭಸಕ್ಕೆ ಅಣೆಕಟ್ಟು ಒಡೆದಿತ್ತಲ್ಲದೆ ರಿಷಿಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿತ್ತು.

ನೀರ್ಗಲ್ಲಿನ ಒಂದು ಭಾಗದಲ್ಲಿ ಬಿರುಕು ಬಿಟ್ಟ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿತ್ತು ಎಂದು ಅಂದಾಜಿಸಲಾಗಿದೆ. ಜಾಗತಿಕ ತಾಪಮಾನ ಏರಿಕೆಯು ಇದಕ್ಕೆ ಕಾರಣವಾಗಿರಬಹುದು.

ಈ ಕುರಿತು ಕೂಲಂಕುಷವಾಗಿ ಅಧ್ಯಯನ ನಡೆಸುತ್ತಿರುವ ಭೂವಿಜ್ಞಾನಿಗಳುಮತ್ತೊಂದು ಸರೋವರದ ರಚನೆಯನ್ನು ಪತ್ತೆಮಾಡಿದ್ದಾರೆ.

ಬಹುಗುಣ ವಿಶ್ವವಿದ್ಯಾಲಯದ ಪ್ರೊಫೆಸರ್ ಸುದ್ರಿಯಾಲ್ ಹೇಮಾವತ್ ನಂದನ್, ಈ ಬಗ್ಗೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಸರೋವರದ ಚಿತ್ರಣದಲ್ಲಿ ಮಗದೊಮ್ಮೆ ರಿಷಿಗಂಗಾದಲ್ಲಿ ನೀರ್ಗಲ್ಲು ಕುಸಿತದ ಭೀತಿ ವ್ಯಕ್ತವಾಗಿದೆ.

ಉಪಗ್ರಹ ಚಿತ್ರಗಳು ಹಾಗೂ ಹೆಲಿಕಾಪ್ಟರ್ ಸಮೀಕ್ಷೆಯಲ್ಲೂ ಸರೋವರದ ಉಪಸ್ಥಿತಿಯನ್ನು ದೃಢೀಕರಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಸಮುದ್ರ ಮಟ್ಟದಿಂದ 14,000 ಅಡಿ ಎತ್ತರದಲ್ಲಿರುವ (4,200 ಮೀಟರ್) ಕಣಿವೆ ಪ್ರದೇಶದಲ್ಲಿ ಚಾರಣದ ಮೂಲಕ ತನಿಖೆಗಾಗಿ ತಂಡವನ್ನು ರವಾನಿಸಲಾಗಿದೆ ಎಂದವರು ಮಾಹಿತಿ ನೀಡಿದರು.

ಕಳೆದ ಕೆಲವು ದಿನಗಳಿಂದ ರಿಷಿಗಂಗಾದಲ್ಲಿ ನೀರಿನ ಹರಿವು ಕಡಿಮೆಯಿತ್ತು. ಆದರೆ ಈಗ ನೀರಿನ ಹರಿವು ಹೆಚ್ಚಾಗಿದೆ. ನೀರನ್ನು ಸಂಗ್ರಹಿಸಿ ಹರಿವು ಇಲ್ಲವಾಗಿದ್ದರೆ ಮತ್ತಷ್ಟು ಅಪಾಯಕಾರಿಯಾಗುತ್ತಿತ್ತು ಎಂಬ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.