
ಪುಣೆ: ‘ಜಗತ್ತು ಭಾರತವನ್ನು ಹೆಚ್ಚು ಸಕಾರಾತ್ಮಕವಾಗಿ ಗ್ರಹಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಇಲ್ಲಿ ಹೇಳಿದರು.
ನಗರದಲ್ಲಿ ನಡೆದ ಸಿಂಬಯೋಸಿಸ್ ಇಂಟರ್ನ್ಯಾಷನಲ್ನ (ಡೀಮ್ಡ್ ಯೂನಿವರ್ಸಿಟಿ) 22ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯು ಗಮನಾರ್ಹ ಬದಲಾವಣೆಗೆ ಒಳಗಾಗುತ್ತಿರುವ ಕಾಲಘಟ್ಟದಲ್ಲಿ, ದೇಶದ ವಿಕಾಸವು ಪ್ರಸ್ತುತ ನಿರಾಕರಿಸಲಾಗದ ವಾಸ್ತವ’ ಎಂದರು.
‘ಜಗತ್ತಿನಲ್ಲಿ ಹಲವು ಶಕ್ತಿ ಕೇಂದ್ರಗಳು ಹೊರಹೊಮ್ಮಿವೆ. ಯಾವುದೇ ದೇಶ ಎಷ್ಟೇ ಶಕ್ತಿಶಾಲಿಯಾಗಿರಲಿ, ಎಲ್ಲ ವಿಷಯಗಳಲ್ಲೂ ತನ್ನ ಇಚ್ಚೆಯನ್ನು ಮತ್ತೊಂದು ದೇಶದ ಮೇಲೆ ಹೇರಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ವಿಶ್ವವು ಪ್ರಸ್ತುತ ನಮ್ಮನ್ನು ಹೇಗೆ ಗ್ರಹಿಸುತ್ತದೆ? ಎಂಬುದಕ್ಕೆ ಉತ್ತರ ಏನೆಂದರೆ... ಮೊದಲಿಗಿಂತ ಹೆಚ್ಚು ಸಕಾರಾತ್ಮಕವಾಗಿ ಮತ್ತು ಗಂಭೀರವಾಗಿ. ಇದಕ್ಕೆ ಕಾರಣಗಳು ನಮ್ಮ ರಾಷ್ಟ್ರೀಯ ಬ್ರ್ಯಾಂಡ್ ಹಾಗೂ ವೈಯಕ್ತಿಕ ಖ್ಯಾತಿ’ ಎಂದರು.
‘ಭಾರತೀಯರನ್ನು ಜಗತ್ತು ಪ್ರಸ್ತುತ ಶಿಸ್ತು, ಬದ್ಧತೆಯಿಂದ ಕೆಲಸ ಮಾಡುವವರು, ತಂತ್ರಜ್ಞಾನದ ಕುಶಲತೆ ಹೊಂದಿರುವವರು, ಕುಟುಂಬ ಕೇಂದ್ರಿತ ಸಂಸ್ಕೃತಿಯನ್ನು ಪಾಲಿಸುವ ಜನರು ಎಂದು ಪರಿಗಣಿಸುತ್ತಿದೆ’ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.