ನವದೆಹಲಿ: ‘ಭಾರತ ಮತ್ತು ಮಾಲ್ದೀವ್ಸ್ ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ’ ವಿಷಯ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರ ಹಂತದ ಉನ್ನತ ಮಟ್ಟದ ಸಭೆಯು ಸೋಮವಾರ ರಾಜಧಾನಿಯಲ್ಲಿ ನಡೆಯಲಿದೆ.
ಸಭೆಯಲ್ಲಿ ಪಾಲ್ಗೊಳ್ಳಲು ಮಾಲ್ದೀವ್ಸ್ನ ವಿದೇಶಾಂಗ ಅಬ್ದುಲ್ಲಾ ಖಲೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭಾನುವಾರ ಇಲ್ಲಿಗೆ ಆಗಮಿಸಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆ ಸೋಮವಾರ ಚರ್ಚಿಸಲಿದೆ. ಈ ವರ್ಷ ಖಲೀಲ್ ಅವರ 3ನೇ ಭೇಟಿ ಇದಾಗಿದೆ.
ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ ಕುರಿತ ಭಾರತ–ಮಾಲ್ದೀವ್ಸ್ ನಡುವಣ ನೀಲನಕ್ಷೆಯನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಲ್ದೀವ್ಸ್ ಪ್ರಧಾನಿ ಮೊಹಮ್ಮದ್ ಮುಯಿಜು ಅನುಮೋದಿಸಿದ್ದರು.
ಈ ಬಗ್ಗೆ ರಾಜಕೀಯ ಅಭಿಪ್ರಾಯ ವಿನಿಮಯದ ಮುಂದುವರಿದ ಭಾಗವಾಗಿ ಈಗ ವಿದೇಶಾಂಗ ಸಚಿವರ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಇವರು ಸಚಿವ ಎಸ್.ಜೈಶಂಕರ್ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಜಲಗಡಿಗೆ ಸಂಬಂಧಿಸಿ ಮಾಲ್ದೀವ್ಸ್ ಭಾರತದ ಪ್ರಮುಖ ನೆರೆ ರಾಷ್ಟ್ರ. ನೆರೆ ರಾಷ್ಟ್ರ ಮೊದಲು ಎಂಬ ನೀತಿಗೆ ಅನುಗುಣವಾಗಿ ಈ ವಲಯದಲ್ಲಿ ಭದ್ರತೆ ಮತ್ತು ಸಮಗ್ರ ಪ್ರಗತಿಗೆ ಪೂರಕವಾಗಿ ಈಗ ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೆಯು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.