ಅಸಾದುದ್ದೀನ್ ಒವೈಸಿ
ಹೈದರಾಬಾದ್: ಜಾಗತಿಕ ಭದ್ರತೆಗೆ ಅಪಾಯ ಒಡ್ಡಿರುವ ಪಾಕಿಸ್ತಾನವನ್ನು ಪರಮಾಣು ನಿಶ್ಶಸ್ತ್ರೀಕರಣಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಶನಿವಾರ ಒತ್ತಾಯಿಸಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ, ‘ವಿಶ್ವಕ್ಕೆ ಅಪಾಯವಾಗಿರುವ ದೇಶದ ವಿರುದ್ಧ ನಾವು ಬಲವಾದ ನಿಲುವು ಕೈಗೊಳ್ಳಬೇಕಿದೆ. ಅಣು ಬಾಂಬ್ಗಳನ್ನು ಹೊಂದಲು ಈ ದೇಶಕ್ಕೆ ಇನ್ನು ಅವಕಾಶ ನೀಡಬೇಕೆ ಎಂಬ ಬಗ್ಗೆ ವಿಶ್ವ ನಾಯಕರು ನಿರ್ಧರಿಸಬೇಕು. ಆ ದೇಶದ ಬಳಿ ಇರುವ ಅಣು ಬಾಂಬ್ಗಳನ್ನು ನಿಶಸ್ತ್ರೀಕರಣಗೊಳಿಸಬೇಕು’ ಎಂದು ಪ್ರತಿಪಾದಿಸಿದರು.
‘ಪಾಕಿಸ್ತಾನದವರು ಭಿಕ್ಷುಕರು. ಐಎಂಎಫ್ನಿಂದ ₹8,500 ಕೋಟಿ (1 ಬಿಲಿಯನ್ ಡಾಲರ್) ಸಾಲ ಪಡೆದುಕೊಂಡಿದ್ದಾರೆ. ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಲ್ಲ. ಪಾಕಿಸ್ತಾನಕ್ಕೆ ಅದು ಅಂತರರಾಷ್ಟ್ರೀಯ ಮಿಲಿಟೆಂಟ್ ನಿಧಿಯಾಗಿದೆ. ಇದಕ್ಕೆ ಅಮೆರಿಕ, ಜರ್ಮನಿ ಹಾಗೂ ಜಪಾನ್ ಹೇಗೆ ಸಮ್ಮತಿ ನೀಡಿದವು? ನಮ್ಮ ನೆಲ, ಮನೆ ಹಾಗೂ ಯೋಧರ ಮೇಲೆ ದಾಳಿ ನಡೆಯುತ್ತಿದೆ’ ಎಂದು ಹೇಳಿದರು.
ಆಡಳಿತ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿರುವ ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸಲು ಇಸ್ಲಾಂ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ದ್ವೇಷ ಹರಡುತ್ತಿದೆ.ಅಸಾದುದ್ದೀನ್ ಒವೈಸಿ, ಎಐಎಂಐಎಂ ಮುಖ್ಯಸ್ಥ
‘ಶ್ರೀನಗರ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಯನ್ನು ಗುರಿಯಾಗಿಸಿ ದಾಳಿ ಡ್ರೋನ್ ನಡೆಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಮ್ಮ ಯೋಧರು ಎಷ್ಟು ಚಾಣಾಕ್ಷರಾಗಿ ಶತ್ರುಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ನಮಗೆ ಯುದ್ಧ ಬೇಕಿಲ್ಲ. ಆದರೆ ಬೇರೆಯವರಿಗೆ ಬೇಕಿದ್ದಲ್ಲಿ ನಾವು ಯುದ್ಧ ಮಾಡಬೇಕು.ರಾಜಕೀಯವನ್ನು ಮರೆತು ದೇಶದ ಸಶಸ್ತ್ರ ಪಡೆಗಳಿಗೆ ಎಲ್ಲ ಭಾರತೀಯರು ಬೆಂಬಲ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.