ADVERTISEMENT

ಗುರುದ್ವಾರ ನಿರ್ವಹಣೆ ವರ್ಗಾವಣೆ; ಪಾಕ್‌ ನಿರ್ಧಾರಕ್ಕೆ ಭಾರತ ಆಕ್ಷೇಪ

ಪಿಟಿಐ
Published 5 ನವೆಂಬರ್ 2020, 12:29 IST
Last Updated 5 ನವೆಂಬರ್ 2020, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದ ನಿರ್ವಹಣೆಯನ್ನು ಸಿಖ್ ಆಡಳಿತ ಮಂಡಳಿಯಿಂದ ಸಿಖ್‌ ಸಮುದಾಯಕ್ಕೆ ಸೇರದ ಪ್ರತ್ಯೇಕ ಟ್ರಸ್ಟ್‌ಗೆ ವರ್ಗಾಯಿಸುವ ಪಾಕಿಸ್ತಾನದ ನಿರ್ಧಾರ ಅತ್ಯಂತ ಖಂಡನೀಯವಾಗಿದ್ದು, ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ‘ ಎಂದು ಭಾರತ ಆಕ್ಷೇಪಿಸಿದೆ.

‌ಪಾಕಿಸ್ತಾನ ಕರ್ತಾಪುರದ ಸಾಹಿಬ್ ಗುರುದ್ವಾರ ಸಮಿತಿಯ ಪ್ರಾತಿನಿಧ್ಯ ಹೊಂದಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗುರುದ್ವಾರದ ನಿರ್ವಹಣೆಯನ್ನು, ಪಾಕಿಸ್ತಾನ್ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯಿಂದ, ಸಿಖ್‌ ಸಮುದಾಯವಲ್ಲದ ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಆಡಳಿತ ಮಂಡಳಿಯ ನಿಯಂತ್ರಣಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಎರಡು ದೇಶಗಳ ಜನರ ಸಹಕಾರದಿಂದ ಭಾರತದ ಗುರುದಾಸ್‌ಪುರದಲ್ಲಿರುವ ದೇರಾ ಬಾಬಾ ಸಾಹಿಬ್‌ ಮತ್ತು ಪಾಕಿಸ್ತಾನದಲ್ಲಿರುವ ಗುರುದ್ವಾರ ಕರ್ತಾಪುರ ಸಾಹಿಬ್‌ ನಡುವೆ ಕಾರಿಡಾರ್ ತೆರುವುಗೊಳಿಸಲಾಗಿತ್ತು. ಇದೊಂದು ಐತಿಹಾಸಿಕ ಘಟನೆಯಾಗಿತ್ತು.

ADVERTISEMENT

‘ಈಗ ಪಾಕಿಸ್ತಾನದ ಗುರುದ್ವಾರದ ನಿರ್ವಹಣೆಯನ್ನು ಬೇರೆ ಟ್ರಸ್ಟ್‌ಗೆ ವರ್ಗಾಯಿಸುತ್ತಿರುವ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಪಾಕಿಸ್ತಾನ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರ ಖಂಡನೀಯ ‘ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.