ನವದೆಹಲಿ: ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಎದುರು ಖಾಲಿಸ್ತಾನ ಪರ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿರುವುದನ್ನು ಆಕ್ಷೇಪಿಸಿರುವ ಭಾರತವು, ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಕ್ಯಾಮರಾನ್ ಮ್ಯಾಕೆ ಅವರನ್ನು ಕರೆಸಿ ವಿವರಣೆ ಕೇಳಿದೆ.
ಭಾರತದ ವಿದೇಶಾಂಗ ಸಚಿವಾಲಯವು ಶನಿವಾರ ಮ್ಯಾಕೆ ಅವರನ್ನು ಕರೆಸಿದ್ದು, ಪೊಲೀಸರ ಉಪಸ್ಥಿತಿಯ ಹೊರತಾಗಿಯೂ ಕಾನ್ಸುಲೇಟ್ಗ ಭದ್ರತೆಯನ್ನು ಉಲ್ಲಂಘಿಸಲು ಪ್ರತಿಭಟನನಿರತ ಪ್ರತ್ಯೇಕತಾವಾದಿ ಮತ್ತು ಉಗ್ರ ಸಂಘಟನೆಗಳಿಗೆ ಹೇಗೆ ಅನುಮತಿಸಲಾಯಿತು ಎನ್ನುವ ಕುರಿತು ವಿವರಣೆಯನ್ನು ಕೇಳಿದೆ ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಭಾನುವಾರ, ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಎದುರು ಖಾಲಿಸ್ತಾನ ಪರ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಅಲ್ಲಿರುವ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಭಾರತದ ಸಂಜಾತ, ಪತ್ರಕರ್ತ ಸಮೀರ್ ಕೌಶಲ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಖಾಲಿಸ್ತಾನ ಪರ ಪ್ರತಿಭಟನೆ ನಡೆಸಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಎಂದು ವಿದೇಶಾಂಗ ಸಚಿವಾಲಯವು ಕೆನಡಾಕ್ಕೆ ಆಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.