ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಮೂಲಕ ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಪಾಕಿಸ್ತಾನದ ಯತ್ನವನ್ನುವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಡ್ಡಿಪಡಿಸಿದೆ.
ಈ ಸಂಬಂಧ ಮಂಡಳಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಭಾರತವು, ಭಯೋತ್ಪಾದನೆ ವಿಚಾರವನ್ನೂ ರಾಜಕೀಯಗೊಳಿಸುವ ಪಾಕಿಸ್ತಾನದ ‘ನಿರ್ಲಜ್ಜ ಯತ್ನ’ವನ್ನು ಟೀಕಿಸಿದೆ. ಅಲ್ಕೈದಾ ನಿರ್ಬಂಧ ಸಮಿತಿಯಡಿ ಅಂಗಾರ ಅಪ್ಪಾಜಿ ಹಾಗೂ ಗೋಬಿಂದ ಪಟ್ನಾಯಕ್ ಹೆಸರು ಸೇರ್ಪಡೆಗೆ ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಪಾಕಿಸ್ತಾನದ ನಡೆಗೆ ಅಡ್ಡಿಪಡಿಸಿದೆ. ಇವರನ್ನು ಉಗ್ರರ ಪಟ್ಟಿಗೆ ಸೇರಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪಾಕಿಸ್ತಾನ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಅಜಯ್ ಮಿಸ್ತ್ರಿ ಹಾಗೂ ವೇಣುಮಾಧವ್ ಡೋಂಗ್ರ ಅವರನ್ನು ಉಗ್ರರ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಇದನ್ನೂ ಮಂಡಳಿಯು ಕಳೆದ ಜುಲೈನಲ್ಲಿ ನಿರಾಕರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.